ಬೆಂಗಳೂರು: ಭಾರತೀಯ ಸಾಮಗಾನ ಸಭಾ ಆಯೋಜಿಸಿರುವ 14ನೇ ಭಾರತೀಯ ಶಾಸ್ತ್ರೀಯ ಸಂಗೀತೋತ್ಸವ ‘ಸ್ವರ ಕಾವೇರಿ’ ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಫೆ.23ರಿಂದ 26ರವರೆಗೆ ನಡೆಯಲಿದೆ.
ಸ್ವರ ಕಾವೇರಿ ಸಂಗೀತ ಉತ್ಸವವು ಕರ್ನಾಟಕ ಶಾಸ್ತ್ರೀಯ ಸಂಗೀತದ ಸಾಂಸ್ಕೃತಿಕ ಮೌಲ್ಯಗಳು, ದೇವಾಲಯ ಗೀತೆಗಳು, ಹಬ್ಬ ಉತ್ಸವದ ಗೀತೆಗಳು, ಆಧ್ಯಾತ್ಮಿಕ ಗೀತೆಗಳು, ಜನಪ್ರಿಯ ಸಾಂಪ್ರದಾಯಿಕ ಗೀತೆಗಳು, ಚಿಕಿತ್ಸಾ ಸಂಗೀತ, ಲಲಿತ ಕಲೆಯನ್ನು ಬಿಂಬಿಸುವ ಸಂಗೀತವನ್ನು ಒಳಗೊಂಡಿದೆ.
ರಂಜನಿ ಗಾಯತ್ರಿ, ರಾಜೇಶ್ ವೈದ್ಯ, ಸಂದೀಪ್ ನಾರಾಯಣ್, ತ್ರಿಚೂರು ಸಹೋದರರು, ಅಮೃತ ವೆಂಕಟೇಶ್, ಶ್ರೀರಂಜನಿ ಸಂತಾನ ಗೋಪಾಲನ್, ಐಶ್ವರ್ಯ ವಿದ್ಯಾ ರಘುನಾಥ್, ಅನಾಹಿತ ಅಪೂರ್ವ, ಮಾಧುರಿ ಕೌಶಿಕ್ ಮತ್ತು ಚಿಲ್ಕುಂದ ಸಹೋದರಿಯರು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಭಾರತೀಯ ಸಾಮಗಾನ ಸಭಾ ತಿಳಿಸಿದೆ.
11ನೇ ಸಾಮಗಾನ ಮಾತಂಗ ರಾಷ್ವ್ರೀಯ ಪ್ರಶಸ್ತಿಯನ್ನು ಈ ಬಾರಿ ವಿದುಷಿ ರಂಜನಿ ಗಾಯತ್ರಿ ಅವರಿಗೆ ನೀಡಲಾಗುತ್ತಿದ್ದು, ಪ್ರಶಸ್ತಿ ಪ್ರದಾನ ಸಮಾರಂಭ ಫೆ.26ರಂದು ಸಂಜೆ 5 ಗಂಟೆಗೆ ನಡೆಯಲಿದೆ. ವ್ಯಾಸ ಯೋಗ ವಿದ್ಯಾಲಯದ ಕುಲಪತಿ ನಾಗೇಂದ್ರ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮೂರ್ತಿ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ, ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಎಂ.ಪಿ.ಶ್ಯಾಮ್ ಅವರಿಗೂ ಗೌರವ ಸನ್ಮಾನ ನಡೆಯಲಿದ್ದು, ಸಂಗೀತ ತಜ್ಞ ಪ್ರೊ.ಮುರಳೀಧರ ಹೆಗಡೆ ಅವರು ಸನ್ಮಾನ ನಡೆಸಿಕೊಡುವರು ಎಂದು ವಿವರಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.