ADVERTISEMENT

ಎಬಿವಿಪಿ: ನಾಳೆಯಿಂದ ‘ಸೃಷ್ಟಿ’ ತಾಂತ್ರಿಕ ಮೇಳ

​ಪ್ರಜಾವಾಣಿ ವಾರ್ತೆ
Published 21 ಮೇ 2025, 20:10 IST
Last Updated 21 ಮೇ 2025, 20:10 IST
   

ಬೆಂಗಳೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಇದೇ 23ರಿಂದ 25ರವರೆಗೆ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ‘ಸೃಷ್ಟಿ’ ತಾಂತ್ರಿಕ ಮೇಳವನ್ನು ಆಚಾರ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಹಮ್ಮಿಕೊಂಡಿದೆ. 

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಬಿವಿಪಿ ಕರ್ನಾಟಕ ದಕ್ಷಿಣ ಪ್ರಾಂತದ ಸವಿಷ್ಕಾರ ಸಂಚಾಲಕಿ ಸೃಷ್ಟಿ, ‘ಐಟಿ–ಬಿಟಿ ಕ್ಷೇತ್ರಕ್ಕೆ ಕೊಡುಗೆಯಾಗಿ ಈ ಸಮಾವೇಶ ಏರ್ಪಡಿಸಲಾಗಿದೆ. ರಾಜ್ಯದ 230 ಎಂಜಿನಿಯರಿಂಗ್‌ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದು, ಸುಮಾರು 500ಕ್ಕೂ ಅಧಿಕ ಯೋಜನಾ ಮಾದರಿಗಳು ಸ್ಪರ್ಧೆಯಲ್ಲಿ ಪ್ರದರ್ಶನ ಕಾಣಲಿವೆ. 3 ಸಾವಿರ ವಿದ್ಯಾರ್ಥಿ ಪ್ರತಿನಿಧಿಗಳು, 300 ಅಧ್ಯಾಪಕರು ಹಾಗೂ 100ಕ್ಕೂ ಅಧಿಕ ವಿಜ್ಞಾನಿಗಳು ಭಾಗವಹಿಸುತ್ತಾರೆ. ಮೂರು ದಿನಗಳ ಈ ಮೇಳಕ್ಕೆ ಒಟ್ಟು 50 ಸಾವಿರ ಜನರು ಭೇಟಿ ನೀಡುವ ನಿರೀಕ್ಷೆಯಿದೆ’ ಎಂದು ತಿಳಿಸಿದರು.

‘ವಿವಿಧ ವಿಭಾಗಗಳಲ್ಲಿ ಸ್ಪರ್ಧೆಯ ವಿಜೇತರಿಗೆ ಒಟ್ಟು ₹ 25 ಲಕ್ಷ ನಗದು ಬಹುಮಾನ ಕೊಡಲಾಗುವುದು. ಅತಿ ಹೆಚ್ಚು ಪ್ರಾಜೆಕ್ಟ್‌ಗಳಲ್ಲಿ ಗೆಲ್ಲುವ ಕಾಲೇಜಿಗೆ ‘ಸೃಷ್ಟಿ 2025 ಚಾಂಪಿಯನ್‌ ಟ್ರೋಫಿ’ ನೀಡಲಾಗುತ್ತದೆ. ವಿದ್ಯಾರ್ಥಿ ಸ್ನೇಹಿ ಕಾಲೇಜಿಗೆ ಪ್ರತ್ಯೇಕ ವಿಶೇಷ ಬಹುಮಾನ ನೀಡಲಾಗುತ್ತದೆ. ಈ ಮೇಳದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ’ ಎಂದು ವಿವರಿಸಿದರು.

ADVERTISEMENT

‘ಮೇ 23 ರಂದು ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ (ಎಐಸಿಟಿಇ) ಉಪಾಧ್ಯಕ್ಷ ಅಭಯ್‌ ಜೆರೆ ಪಾಲ್ಗೊಳ್ಳುತ್ತಾರೆ. ಸಮಾರೋಪ ಸಮಾರಂಭದಲ್ಲಿ ಎಐಸಿಟಿಇ ಅಧ್ಯಕ್ಷ ಪ್ರೊ. ಅನಿಲ್‌ ಸಹಸ್ರಬುದ್ಧೆ ಭಾಗವಹಿಸುತ್ತಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.