ADVERTISEMENT

ಯುವತಿಗೆ ‘ಒಂಟಿಯಾಗಿ ಬಾ’ ಎಂದ ಟೆಕಿ ಬಂಧನ

​ಪ್ರಜಾವಾಣಿ ವಾರ್ತೆ
Published 11 ಮೇ 2019, 20:22 IST
Last Updated 11 ಮೇ 2019, 20:22 IST
ಭಾಸ್ಕರ್
ಭಾಸ್ಕರ್   

ಬೆಂಗಳೂರು: ತಾನು ಕರೆದ ಜಾಗಕ್ಕೆ ಒಂಟಿಯಾಗಿ ಬರುವಂತೆ ಮಾಜಿ ‍ಪ್ರೇಯಸಿಗೆ ಪೀಡಿಸುತ್ತಿದ್ದ ಆರೋಪದಡಿ ಭಾಸ್ಕರ್ ನರದಾಸಿ (29) ಎಂಬ ಸಾಫ್ಟ್‌ವೇರ್ ಎಂಜಿನಿಯರ್‌ನನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ.

ಚಿತ್ತೂರಿನ ಭಾಸ್ಕರ್, ನಾಲ್ಕು ವರ್ಷಗಳ ಹಿಂದೆ ನಗರಕ್ಕೆ ಬಂದು ಕೋನಪ್ಪನ ಅಗ್ರಹಾರದಲ್ಲಿ ನೆಲೆಸಿದ್ದ. ‘ನಾನು ಹಾಗೂ ಭಾಸ್ಕರ್ ಮೊದಲು ಪ್ರೀತಿಸುತ್ತಿದ್ದೆವು. ಆ ಸಂದರ್ಭದಲ್ಲಿ ಒಟ್ಟಿಗೇ ಕೆಲವು ಫೋಟೊಗಳನ್ನೂ ತೆಗೆಸಿಕೊಂಡಿದ್ದೆವು. ಈ ನಡುವೆ ಆತನ ವರ್ತನೆಯಿಂದ ಬೇಸರವಾಗಿ ದೂರವಾಗಿದ್ದೆ. ಇಷ್ಟು ದಿನ ಸುಮ್ಮನಿದ್ದ ಆತ, ಈಗ ಹಳೇ ಫೊಟೊಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾನೆ’ ಎಂದು 27 ವರ್ಷದ ಯುವತಿ ಮೇ 1ರಂದು ಠಾಣೆಗೆ ದೂರು ಕೊಟ್ಟಿದ್ದರು.

‘ಭಾಸ್ಕರ್ ಕಿರುಕುಳ ನೀಡುತ್ತಿರುವ ವಿಚಾರ ನನ್ನ ತಂದೆಗೆ ಗೊತ್ತಾಯಿತು. ಆತನನ್ನು ಕರೆಸಿ ಬುದ್ಧಿ ಹೇಳಿ ಕಳುಹಿಸಿದ್ದರು. ಆದರೂ ಆತನ ಕಾಟ ತಪ್ಪಿಲ್ಲ. ‘ನಾನು ಕರೆದ ಜಾಗಕ್ಕೆ ಒಂಟಿಯಾಗಿ ಬರಬೇಕು. ನನ್ನ ಜತೆ ಒಂದು ದಿನ ಇರಬೇಕು. ಇಲ್ಲದಿದ್ದರೆ ಫೋಟೊಗಳನ್ನು ಇಂಟರ್‌ನೆಟ್‌ನಲ್ಲಿ ಹಾಕಿ ಮರ್ಯಾದೆ ತೆಗೆಯುತ್ತೇನೆ’ ಎಂದು ಬೆದರಿಸುತ್ತಿದ್ದಾನೆ’ ಎಂದು ಸಂತ್ರಸ್ತೆ ಮನವಿ ಮಾಡಿದ್ದರು.

ADVERTISEMENT

ಕರೆ ವಿವರ (ಸಿಡಿಆರ್) ಆಧರಿಸಿ ಬಂಧಿಸಿದ ಪೊಲೀಸರು, ನ್ಯಾಯಾಧೀಶರ ಆದೇಶದ ಮೇರೆಗೆ ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.