ಬೆಂಗಳೂರು: ‘ಅಯೋಧ್ಯೆಯ ಪ್ರತಿ ಕಣದಲ್ಲೂ ರಾಮನಿರುವಂತೆ ಬೆಂಗಳೂರಿನ ಕಣ ಕಣದಲ್ಲಿ ತಂತ್ರಜ್ಞಾನ ಅಡಗಿದೆ. ಇದು ತಂತ್ರಜ್ಞಾನದ ನಗರ’ ಎಂದು ಕೇಂದ್ರ ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.
ಇಂಡಿಯಾ ಫೌಂಡೇಷನ್ ವತಿಯಿಂದ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಇಂಡಿಯಾ ಐಡಿಯಾಸ್’ ಸಮಾವೇಶದಲ್ಲಿ ಮಾತನಾಡಿದರು.
‘ಬೆಂಗಳೂರಿನ ಜನರು ತಜ್ಞರಾಗಿದ್ದಾರೆ. ನಾನು ಅವರಿಗಿಂತ ಹೆಚ್ಚಾಗಿ ಅರಿತಿಲ್ಲ’ ಎಂದು ಬೆಂಗಳೂರಿನ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ದೇಶ ಮತ್ತು ಸಮಾಜದ ಅಭಿವೃದ್ಧಿಗೆ ನಾವೇನು ಮಾಡಬೇಕು? ಡಿಜಿಟಲ್ ತಂತ್ರಜ್ಞಾನ, ತಾಂತ್ರಿಕತೆಯನ್ನು ಯಾವ ರೀತಿ ಬಳಸಿಕೊಳ್ಳಬಹುದು ಎಂದು ವಿವರಿಸಿದರು.
ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ,‘ನಮ್ಮ ಪೂರ್ವಜರು ಹೇಳಿದ ಅಂಶಗಳೇ ಈಗ ವಿಜ್ಞಾನದ ಹೆಸರಿನಲ್ಲಿ ಮುಂಚೂಣಿಗೆ ಬರುತ್ತಿವೆ. ತಂತ್ರಜ್ಞಾನ ಅಳವಡಿಕೆ ತಪ್ಪಲ್ಲ. ಆದರೆ, ನಮ್ಮತನ ಕಳೆದುಕೊಳ್ಳಬಾರದು’ ಎಂದರು.
‘ಭಾರತವನ್ನು ನಾಗರಿಕತೆಯ ತೊಟ್ಟಿಲು ಹಾಗೂ ಗಣಿತ ಮತ್ತು ವಿಜ್ಞಾನದ ತವರು ಎಂದು ಕರೆಯಲಾಗಿದೆ. ಈಗ ತಂತ್ರಜ್ಞಾನದಲ್ಲೂ ನಾವು ಮುಂದಿದ್ದೇವೆ. ಆಧುನಿಕ ತಂತ್ರಜ್ಞಾನಗಳಿಂದ ಸಮಾಜಕ್ಕೆ ಅನುಕೂಲವಾಗುತ್ತಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.