ADVERTISEMENT

ಬೆಂಗಳೂರು: ದೇಹದ ಆರು ಕಡೆ ಚಾಕುವಿನಿಂದ ಕೊಯ್ದುಕೊಂಡಿದ್ದ ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2023, 21:12 IST
Last Updated 5 ಮಾರ್ಚ್ 2023, 21:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ದೇಹದ ಆರು ಕಡೆ ಚಾಕುವಿನಿಂದ ಕೊಯ್ದುಕೊಂಡು ಗಾಯಗೊಂಡಿದ್ದ ಪ್ರಭಾಕರ್ ಗುಪ್ತಾ (32) ಎಂಬುವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

‘ಉತ್ತರ ಪ್ರದೇಶದ ಪ್ರಭಾಕರ್, ಪತ್ನಿ ಹಾಗೂ ಸಂಬಂಧಿಕರ ಜೊತೆ ನಗರಕ್ಕೆ ಬಂದಿದ್ದರು. ವಾಜರಹಳ್ಳಿಯಲ್ಲಿ ವಾಸವಿದ್ದರು. ಇವರ ಸಾವಿನ ಸಂಬಂಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ತಲಘಟ್ಟಪುರ ಪೊಲೀಸರು ತಿಳಿಸಿದರು.

‘ಪ್ರಭಾಕರ್ ಅವರು ಸಣ್ಣ ಪ್ರಮಾಣದ ದಿನಸಿ ಅಂಗಡಿ ಇಟ್ಟುಕೊಂಡಿದ್ದರು. ಅವರ ಪತ್ನಿ, ಮನೆಗಳ ಕೆಲಸಕ್ಕೆ ಹೋಗಿ ಬರುತ್ತಿದ್ದರು. ಜೀವನ ನಿರ್ವಹಣೆಗಾಗಿ ಸಾಲ ಮಾಡಿದ್ದ ಪ್ರಭಾಕರ್, ಅದನ್ನು ವಾಪಸು ತೀರಿಸಲಾಗದೇ ಸಂಕಷ್ಟಕ್ಕೆ ಸಿಲುಕಿದ್ದರು’ ಎಂದು ಹೇಳಿದರು.

ADVERTISEMENT

‘ತಿಂಗಳ ಹಿಂದೆಯಷ್ಟೇ ಸಂಬಂಧಿಕರು, ಉತ್ತರ ಪ್ರದೇಶಕ್ಕೆ ಹೋಗಿದ್ದರು. ಪತ್ನಿ ಹಾಗೂ ಪ್ರಭಾಕರ್ ಮಾತ್ರ ಮನೆಯಲ್ಲಿದ್ದರು. ಫೆ. 23ರಂದು ಪತ್ನಿ ಮನೆ ಕೆಲಸಕ್ಕೆ ಹೋಗಿದ್ದರು. ಇದೇ ಸಂದರ್ಭದಲ್ಲಿ ಮನೆ ಬಾಗಿಲು ಒಳಗಿನಿಂದ ಲಾಕ್ ಮಾಡಿಕೊಂಡಿದ್ದ ಪ್ರಭಾಕರ್, ಚಾಕುವಿನಿಂದ ದೇಹದ 6 ಕಡೆ ಕೊಯ್ದುಕೊಂಡಿದ್ದರು. ರಕ್ತ ಸೋರುತ್ತಿದ್ದ ಸ್ಥಿತಿಯಲ್ಲಿ ಮಲಗಿದ್ದರು.’

‘ಕೆಲಸ ಮುಗಿಸಿ ಪತ್ನಿ ಮನೆಗೆ ಬಂದಿದ್ದಾಗ, ಬಾಗಿಲು ತೆಗೆದಿರಲಿಲ್ಲ. ಸ್ಥಳೀಯರ ಸಹಾಯದಿಂದ ಬಾಗಿಲು ತೆಗೆದು ಪತ್ನಿ ಒಳಗೆ ಹೋಗಿದ್ದರು. ಪ್ರಭಾಕರ್, ರಕ್ತಸಿಕ್ತ ಸ್ಥಿತಿಯಲ್ಲಿ ಬಿದ್ದಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇತ್ತೀಚೆಗೆ ಪ್ರಭಾಕರ್ ಮೃತಪಟ್ಟಿದ್ದಾರೆ. ಅವರದ್ದು ಆತ್ಮಹತ್ಯೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.