ಬಂಧನ (ಸಾಂದರ್ಭಿಕ ಚಿತ್ರ)
ಬೆಂಗಳೂರು: ವಿದ್ಯಾರ್ಥಿನಿಗೆ ಬ್ಲ್ಯಾಕ್ಮೇಲ್ ಮಾಡಿ ಚಿನ್ನಾಭರಣ ಹಾಗೂ ನಗದು ಸುಲಿಗೆ ಮಾಡಿದ್ದ ಆರೋಪಿಯನ್ನು ಸುಬ್ರಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಲ್ಲಸಂದ್ರದ ಕಾಕತೀಯನಗರದ ನಿವಾಸಿ ತೇಜಸ್(19) ಬಂಧಿತ ಆರೋಪಿ.
ಠಾಣಾ ವ್ಯಾಪ್ತಿಯ ನಾಯ್ಡುಲೇಔಟ್ ನಿವಾಸಿ ಹೇಮಾ ಅವರು ನೀಡಿದ ದೂರು ಆಧರಿಸಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯಿಂದ ₹3.40 ಲಕ್ಷ ಮೌಲ್ಯದ 50 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
‘ವಿದ್ಯಾರ್ಥಿಯೊಬ್ಬನನ್ನು ಪ್ರೀತಿಸುತ್ತಿರುವ ವಿಷಯವನ್ನು ಸಹೋದರ ಮತ್ತು ತಾಯಿಗೆ ಹೇಳುವುದಾಗಿ ಆರೋಪಿ ಬ್ಲ್ಯಾಕ್ಮೇಲ್ ಮಾಡಿ ಪರಿಚಿತ ವಿದ್ಯಾರ್ಥಿನಿಯಿಂದ 75 ಗ್ರಾಂ. ಚಿನ್ನಾಭರಣ ಹಾಗೂ ₹1.25 ಲಕ್ಷ ನಗದು ಸುಲಿಗೆ ಮಾಡಿದ್ದ’ ಎಂದು ಪೊಲೀಸರು ಹೇಳಿದರು.
‘19 ವರ್ಷದ ವಿದ್ಯಾರ್ಥಿನಿಗೆ ಎರಡು ವರ್ಷದ ಹಿಂದೆ ಕಾಲೇಜಿನ ಸಹಪಾಠಿ ಪ್ರೀತಂ ಮೂಲಕ ತೇಜಸ್ ಪರಿಚಿತನಾಗಿದ್ದ. ಬಳಿಕ ತೇಜಸ್ ವಿದ್ಯಾರ್ಥಿನಿಯ ಮೊಬೈಲ್ ಸಂಖ್ಯೆ ಪಡೆದುಕೊಂಡಿದ್ದ. ಪ್ರೀತಂ ಹಾಗೂ ವಿದ್ಯಾರ್ಥಿನಿ ಪ್ರೀತಿಸುತ್ತಿರುವ ವಿಚಾರವನ್ನು ಕುಟುಂಬದ ಸದಸ್ಯರಿಗೆ ತಿಳಿಸುವುದಾಗಿ ಆಗಾಗ್ಗೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದ. ಮನೆ ಹಾಗೂ ಕಾಲೇಜಿನ ಬಳಿ ತೆರಳಿ ವಿದ್ಯಾರ್ಥಿನಿಗೆ ಹೆದರಿಸಿದ್ದ’ ಎಂದು ಹೇಳಿದರು.
‘ಪ್ರೀತಿಯ ವಿಚಾರವು ಸಹೋದರ ಮತ್ತು ತಾಯಿಗೆ ಗೊತ್ತಾದರೆ, ಮುಂದಿನ ವಿದ್ಯಾಭ್ಯಾಸಕ್ಕೆ ತೊಂದರೆ ಆಗುವ ಭಯದಲ್ಲಿ ವಿದ್ಯಾರ್ಥಿನಿ, ಮನೆಯಲ್ಲಿದ್ದ 75 ಗ್ರಾಂ. ಚಿನ್ನಾಭರಣ ಮತ್ತು ₹1.25 ಲಕ್ಷ ನಗದನ್ನು ಆರೋಪಿಗೆ ತಂದುಕೊಟ್ಟಿದ್ದಳು. ಇತ್ತೀಚೆಗೆ ಮನೆಯ ಬೀರು ತೆಗೆದು ಪರಿಶೀಲಿಸಿದಾಗ ಚಿನ್ನ ಹಾಗೂ ನಗದು ಇಲ್ಲದಿರುವುದು ಗೊತ್ತಾಗಿತ್ತು’ ಎಂದು ಪೊಲೀಸರು ಹೇಳಿದರು.
‘ಆರೋಪಿ ಅರ್ಧಕ್ಕೆ ವ್ಯಾಸಂಗ ಮೊಟಕುಗೊಳಿಸಿ ಡೆಲಿವರಿ ಬಾಯ್ ಕೆಲಸ ಮಾಡಿಕೊಂಡಿದ್ದ. ಸದ್ಯ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.