ಚನ್ನಪ್ಪ ಕಟ್ಟಿ
ಬೆಂಗಳೂರು: ದೂರದೃಷ್ಟಿ ಇಟ್ಟುಕೊಂಡು ಮೂರು ಸಮಿತಿಗಳನ್ನು ಮಾಡಿ ನಾಡಿನ ಸಮಗ್ರ ಅಭಿವೃದ್ಧಿಗಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಶ್ರಮಿಸಿದ್ದರು ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅಧ್ಯಕ್ಷ ಚನ್ನಪ್ಪ ಕಟ್ಟಿ ಸ್ಮರಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಶುಕ್ರವಾರ ಹಮ್ಮಿಕೊಂಡಿದ್ದ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾ ಸಮಿತಿ, ಭೂ ವ್ಯವಸಾಯ ಸಮಿತಿ ಮತ್ತು ಕೈಗಾರಿಕಾ ಸಮಿತಿಗಳನ್ನು ಮಾಡಿ ಯೋಜನೆಗಳನ್ನು ರೂಪಿಸಿದ್ದರು ಎಂದು ಹೇಳಿದರು.
ಮುಜರಾಯಿ ಇಲಾಖೆಯ ಆಯುಕ್ತ ಎಂ.ವಿ. ವೆಂಕಟೇಶ್ ಮಾತನಾಡಿ, ‘ಕನ್ನಡವನ್ನು ಪೂರ್ಣ ಪ್ರಮಾಣದಲ್ಲಿ ಪ್ರೀತಿಸಿ, ಅನುಸರಿಸಬೇಕು. ಆಡಳಿತ, ತಂತ್ರಜ್ಞಾನ ಒಳಗೊಂಡಂತೆ ಪ್ರತಿ ಹಂತದಲ್ಲಿಯೂ ಕನ್ನಡ ಬಳಕೆ ಮಾಡಬೇಕು. ಬದುಕಿನ ಭಾಷೆಯನ್ನಾಗಿ ಮಾಡಿಕೊಳ್ಳಬೇಕು. ಕನ್ನಡದ ಸಾಧಕರನ್ನು ಗುರುತಿಸುವ ಮೂಲಕ ಸಾಧನೆ ಮಾಡುವವರಿಗೆ ಇನ್ನಷ್ಟು ಸ್ಫೂರ್ತಿ ತುಂಬಬೇಕು. ಆಗ ಕನ್ನಡ ಉಳಿಯುತ್ತದೆ’ ಎಂದು ಸಲಹೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಮಾಹಿತಿ ಆಯೋಗ ಆಯುಕ್ತ ರುದ್ರಣ್ಣ ಹರ್ತಿಕೋಟೆ, ದಾನಿಗಳಾದ ಎನ್.ಕೆ. ರಮೇಶ್, ಪಿ. ಮಹೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.