ADVERTISEMENT

ಶಿಕ್ಷಣ, ಆರೋಗ್ಯಕ್ಕೆ ಕ್ರೈಸ್ತರ ಕೊಡುಗೆ ಅನನ್ಯ: ಯು.ಟಿ.ಖಾದರ್

ಫೆಡರೇಷನ್‌ ಆಫ್‌ ಕೊಂಕಣಿ ಕಥೋಲಿಕ್‌ ಅಸೋಸಿಯೇಷನ್‌ನ ‘ಬೆಳ್ಳಿ ಹಬ್ಬ’

​ಪ್ರಜಾವಾಣಿ ವಾರ್ತೆ
Published 25 ಜೂನ್ 2023, 15:49 IST
Last Updated 25 ಜೂನ್ 2023, 15:49 IST
ನಗರದಲ್ಲಿ ಭಾನುವಾರ ನಡೆದ ಫೆಡರೇಷನ್‌ ಆಫ್‌ ಕೊಂಕಣಿ ಕಥೋಲಿಕ್‌ ಅಸೋಸಿಯೇಷನ್‌ನ ‘ಬೆಳ್ಳಿ ಹಬ್ಬ’ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ಅವರನ್ನು ಸನ್ಮಾನಿಸಲಾಯಿತು. ಬಳ್ಳಾರಿಯ ಬಿಷಪ್‌ ಹೆನ್ರಿ ಡಿಸೋಜಾ, ಸಿಲ್ವಿಯನ್‌ ನರೋನ, ಡಾ.ಎಡ್ವರ್ಡ್‌ ಆನಂದ್ ಡಿಸೋಜಾ, ಆಂಥೋಣಿ ಗೋನ್ಸಾಲ್ವೆಸ್ ಇದ್ದರು -ಪ್ರಜಾವಾಣಿ ಚಿತ್ರ
ನಗರದಲ್ಲಿ ಭಾನುವಾರ ನಡೆದ ಫೆಡರೇಷನ್‌ ಆಫ್‌ ಕೊಂಕಣಿ ಕಥೋಲಿಕ್‌ ಅಸೋಸಿಯೇಷನ್‌ನ ‘ಬೆಳ್ಳಿ ಹಬ್ಬ’ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ಅವರನ್ನು ಸನ್ಮಾನಿಸಲಾಯಿತು. ಬಳ್ಳಾರಿಯ ಬಿಷಪ್‌ ಹೆನ್ರಿ ಡಿಸೋಜಾ, ಸಿಲ್ವಿಯನ್‌ ನರೋನ, ಡಾ.ಎಡ್ವರ್ಡ್‌ ಆನಂದ್ ಡಿಸೋಜಾ, ಆಂಥೋಣಿ ಗೋನ್ಸಾಲ್ವೆಸ್ ಇದ್ದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಮತ್ತೊಂದು ಧರ್ಮ ಹಾಗೂ ವ್ಯಕ್ತಿಗಳನ್ನು ನಿಂದಿಸುವುದೇ ದೇಶಪ್ರೇಮವೆಂದು ಕೆಲವರು ಭಾವಿಸಿದ್ದಾರೆ. ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಸಮಾಜದಲ್ಲಿ ಬದಲಾವಣೆ ತರುವುದೇ ನೈಜ ದೇಶಪ್ರೇಮ’ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.

ನಗರದಲ್ಲಿ ಭಾನುವಾರ ನಡೆದ ಫೆಡರೇಷನ್‌ ಆಫ್‌ ಕೊಂಕಣಿ ಕಥೋಲಿಕ್‌ ಅಸೋಸಿಯೇಷನ್‌ನ ‘ಬೆಳ್ಳಿ ಹಬ್ಬ’ ಹಾಗೂ ಸಾಧಕರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.‌

‘ಸರ್ವ ಜನಾಂಗದ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಟ್ಟು ಬದಲಾವಣೆ ತರುವುದು ಮುಖ್ಯ. ಸರ್ವ ಜನರೂ ಬಲಿಷ್ಠರಾದರೆ ಮಾತ್ರವೇ ಆ ರಾಷ್ಟ್ರವು ಅಭಿವೃದ್ಧಿ ಹೊಂದಲು ಸಾಧ್ಯ’ ಎಂದು ಹೇಳಿದರು.

ADVERTISEMENT

‘ರಾಜ್ಯದಲ್ಲಿ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಕ್ರೈಸ್ತ ಸಮುದಾಯದ ಕೊಡಗು ಅಪಾರ. ಇದು ಬೇರೆ ಸಮಾಜಕ್ಕೂ ಮಾದರಿ. ಇದರ ಸೌಲಭ್ಯವನ್ನು ಎಲ್ಲ ಸಮಾಜಗಳೂ ಪಡೆದುಕೊಳ್ಳುತ್ತಿವೆ. ದಕ್ಷಿಣ ಕನ್ನಡ, ಬೆಂಗಳೂರು, ಮೈಸೂರು ಜಿಲ್ಲೆಗಳು ಶೈಕ್ಷಣಿಕ ಕ್ಷೇತ್ರದ ಸ್ವರ್ಗವಾಗಿದೆ. ಈ ಜಿಲ್ಲೆಗಳು ಅಭಿವೃದ್ಧಿ ಹೊಂದಲು ಹೆಚ್ಚಿನ ಶಿಕ್ಷಣ ಸಂಸ್ಥೆಗಳಿರುವುದೂ ಮತ್ತೊಂದು ಕಾರಣವಾಗಿದೆ’ ಎಂದು ಹೇಳಿದರು.

ಇದೇ ವೇಳೆ ಜೀವಮಾನ ಸಾಧನೆಗೆ ಮಾನವ ಹಕ್ಕುಗಳ ಹೋರಾಟಗಾರ ಡಾ.ಕಿರಣ್‌ ಕಮಾಲ್‌ ಪ್ರಸಾದ್‌, ವೃತ್ತಿಪರ ಸಾಧನೆ ಪುರಸ್ಕಾರವನ್ನು ಬರಹಗಾರ ಸ್ಟೀಫನ್‌ ಖ್ವಾಡ್ರೋಸ್‌, ವರ್ಷದ ಉದ್ಯಮಿ ಪ್ರಶಸ್ತಿಯನ್ನು ಮೈಕಲ್ ಡಿಸೋಜ ಅವರಿಗೆ ಪ್ರದಾನ ಮಾಡಲಾಯಿತು. ಬಳ್ಳಾರಿ ಬಿಷಪ್‌ ಹೆನ್ರಿ ಡಿಸೋಜಾ, ಸಿಲ್ವಿಯನ್‌ ನೊರೋನ, ಡಾ.ಎಡ್ವರ್ಡ್‌ ಆನಂದ್ ಡಿಸೋಜಾ, ಆಂಥೋಣಿ ಗೋನ್ಸಾಲ್ವೆಸ್ ಇದ್ದರು.

ಇಂಧನ ಸಚಿವ ಕೆ.ಜೆ.ಜಾರ್ಜ್‌ ಇದ್ದರು.

ಯಾವುದೇ ಪಕ್ಷದ ಪ್ರಾಥಮಿಕ ಸದಸ್ಯತ್ವವಿಲ್ಲದ ನಾನೀಗ ಪ್ರತಿಪಕ್ಷದ ಮಿತ್ರ. ವಿರೋಧಪಕ್ಷದ ಜತೆಗೆ ಎಷ್ಟೇ ಸ್ನೇಹಮಯವಾಗಿ ವರ್ತಿಸಿದ್ದರೂ ಅವರು ನನ್ನ ಮೇಲೆ ಸಂದೇಹ ಪಡುವುದು ತಪ್ಪುವುದಿಲ್ಲ.
–ಯು.ಟಿ.ಖಾದರ್ ವಿಧಾನಸಭಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.