ADVERTISEMENT

ಕನ್ನಡಿಗರ ಅಸ್ಮಿತೆ ಕಾಪಾಡಿದ್ದ ನಾಲ್ವಡಿ

ಕೃಷ್ಣರಾಜ ಒಡೆಯರ್ ಅವರ ಪುತ್ಥಳಿ ಅನಾವರಣ ಮಾಡಿದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್

​ಪ್ರಜಾವಾಣಿ ವಾರ್ತೆ
Published 21 ಜುಲೈ 2023, 20:30 IST
Last Updated 21 ಜುಲೈ 2023, 20:30 IST
ಕನ್ನಡ ಸಾಹಿತ್ಯ ಪರಿಷತ್ತು ಆವರಣದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಯನ್ನು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಶುಕ್ರವಾರ ಅನಾವರಣಗೊಳಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ, ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್ ಇದ್ದರು–ಪ್ರಜಾವಾಣಿ ಚಿತ್ರ
ಕನ್ನಡ ಸಾಹಿತ್ಯ ಪರಿಷತ್ತು ಆವರಣದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಯನ್ನು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಶುಕ್ರವಾರ ಅನಾವರಣಗೊಳಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ, ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್ ಇದ್ದರು–ಪ್ರಜಾವಾಣಿ ಚಿತ್ರ   

ಬೆಂಗಳೂರು: ’ಬ್ರಿಟಿಷರೊಂದಿಗೆ ಮೈಸೂರು ಅರಸರ ಸಂಬಂಧ ಚೆನ್ನಾಗಿತ್ತು ಎಂದು ಬಹುತೇಕರು ತಿಳಿದುಕೊಂಡಿದ್ದಾರೆ. ಆದರೆ, ಸಂಘರ್ಷ ನಿರಂತರವಾಗಿ ಇತ್ತು. ಮುಮ್ಮಡಿ ಕೃಷ್ಣರಾಜ ಒಡೆಯರು ಅನೇಕ ಸಂಘರ್ಷಗಳನ್ನು ಎದುರಿಸಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರು ಚಾಕಚಕ್ಯತೆಯಿಂದ ಎದುರಿಸಿ ಕನ್ನಡಿಗರ ಅಸ್ಮಿತೆ ಉಳಿಸಿದರು’ ಎಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಶುಕ್ರವಾರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪುತ್ಥಳಿಯನ್ನು ಅನಾವರಣ ಮಾಡಿ ಅವರು ಮಾತನಾಡಿದರು.

‘ಬ್ರಿಟಿಷರ ಒಡೆದು ಆಳುವ ನೀತಿಯನ್ನು ಸಕಾರಾತ್ಮಕವಾಗಿ ಮೆಟ್ಟಿ ನಿಲ್ಲುವ ದೃಷ್ಟಿಯಿಂದ ಕನ್ನಡಿಗರನ್ನು ಒಂದುಗೂಡಿಸಲು ಕನ್ನಡ ಸಾಹಿತ್ಯ ಪರಿಷತ್ತು ಆರಂಭಿಸಿರುವುದು ಅವರ ದೂರದೃಷ್ಟಿಯ ದ್ಯೋತಕ’ ಎಂದು ಬಣ್ಣಿಸಿದರು.

ADVERTISEMENT

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಮಾತನಾಡಿ, ‘ನಾಲ್ವಡಿ ಕೃಷ್ಣರಾಜ ಒಡೆಯರ ಪುತ್ಥಳಿಯು ಪರಿಷತ್ತಿನ ಮೊದಲ ಮಹಡಿಯಲ್ಲಿತ್ತು. ಪರಿಷತ್ತಿನ ಅಧ್ಯಕ್ಷರನ್ನು ನೋಡಲು ಬರುವವರು ಮಾತ್ರ ಮಹಾರಾಜರ ಪುತ್ಥಳಿಯ ದರ್ಶನವನ್ನು ಪಡೆಯಬಹುದಿತ್ತು. ಈಗ ಪುತ್ಥಳಿಯನ್ನು ಪರಿಷತ್ತಿನ ಆವರಣದಲ್ಲಿ ಸ್ಥಾಪನೆ ಮಾಡಿ ಜನ ಸಾಮಾನ್ಯರೂ ನಾಲ್ವಡಿ ಅವರಿಗೆ ಗೌರವ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ’ ಎಂದು ತಿಳಿಸಿದರು.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಮಾತನಾಡಿ, ‘ಪುತ್ಥಳಿಯ ಜೊತೆಗೆ ಮಹಾಪುರುಷರ ಬದುಕು, ಆದರ್ಶ ನೆನಪಾಗಬೇಕು. ನಾಲ್ವಡಿ ಕೃಷ್ಣರಾಜ ಒಡೆಯರ್ ಪುತ್ಥಳಿಯ ಮೂಲಕ ಅವರನ್ನೇ ಕಂಡಂತಾಗಬೇಕು. ನಾಲ್ವಡಿಯವರು ದಾರಿದೀಪವನ್ನು ಸ್ಥಾಪಿಸಿದ್ದರು ಎಂದು ಎಲ್ಲರೂ ನೆನಪು ಮಾಡಿಕೊಳ್ಳುತ್ತಾರೆ.  ವಾಸ್ತವವೆಂದರೆ ಅವರು ನಾಡಿನ ಜನರ ಬದುಕಿಗೇ ದಾರಿದೀಪವಾಗಿದ್ದವರು’ ಎಂದು ಹೇಳಿದರು.

ನಾಲ್ವಡಿ ಕೃಷ್ಣರಾಜ ಒಡೆಯರ ಸಾಧನೆಯನ್ನು ಬಿಂಬಿಸುವ ಕವಿತೆಯನ್ನು ಕವಿ ದೊಡ್ಡರಂಗೇಗೌಡ ಓದಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.