ADVERTISEMENT

ಮಾಲೀಕನ ಮನೆಯಲ್ಲಿ ಕಳವು; ಕೆಲಸಗಾರನ ಬಂಧನ

​ಪ್ರಜಾವಾಣಿ ವಾರ್ತೆ
Published 29 ಜೂನ್ 2018, 20:04 IST
Last Updated 29 ಜೂನ್ 2018, 20:04 IST

ಬೆಂಗಳೂರು: ಬಾಗಲೂರಿನ ನಿವಾಸಿ ಕೃಷ್ಣಪ್ಪ ಎಂಬುವರ ಮನೆಯಲ್ಲಿ ಕಳ್ಳತನ ಎಸಗಿದ್ದ ಆರೋಪದಡಿ ಕೆಲಸಗಾರ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ದೇವನಹಳ್ಳಿ ತಾಲ್ಲೂಕಿನ ಕಸಬಾ ಹೋಬಳಿಯ ಸುಬ್ರಮಣಿ, ಆತನ ಸ್ನೇಹಿತರಾದ ಪ್ರಕಾಶ್‌ ಹಾಗೂ ಸಂದೀಪ್ ಬಂಧಿತರು. ಅವರಿಂದ ₹1 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದರು.

ಆರೋಪಿ ಸುಬ್ರಮಣಿ, ಹಲವು ವರ್ಷಗಳಿಂದ ಕೃಷ್ಣಪ್ಪ ಅವರ ಮನೆಯಲ್ಲಿ ಕೆಲಸಕ್ಕಿದ್ದರು. ಮನೆಯ ಬೀಗದ ಕೀಯನ್ನು ತಿಂಗಳ ಹಿಂದೆ ಕದ್ದು ನಕಲಿ ಕೀ ಮಾಡಿಸಿಟ್ಟುಕೊಂಡಿದ್ದರು. ಅದನ್ನು ಬಳಸಿ ಕೃತ್ಯ ಎಸಗಿದ್ದರು ಎಂದು‍ಪೊಲೀಸರು ವಿವರಿಸಿದರು.

ADVERTISEMENT

ಕೃಷ್ಣಪ್ಪ ಜೂನ್ 24ರಂದು ರಾತ್ರಿ ಮನೆಗೆ ಬೀಗ ಹಾಕಿಕೊಂಡುಕುಟುಂಬ ಸಮೇತ ಹೊರಗಡೆ ಹೋಗಿದ್ದರು. ಅದೇ ಸಂದರ್ಭದಲ್ಲಿ ಸ್ನೇಹಿತರ ಜೊತೆ ಸೇರಿ ಮನೆಗೆ ಹೋಗಿದ್ದ ಆರೋಪಿ, ನಕಲಿ ಕೀ ಬಳಸಿ ಬಾಗಿಲು ತೆರೆದಿದ್ದರು. ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು. ಜೂನ್ 25ರಂದು ಮಾಲೀಕರು ಮನೆಗೆ ವಾಪಸ್‌ ಬಂದಾಗಲೇ ಕೃತ್ಯ ಗಮನಕ್ಕೆ ಬಂದಿತ್ತು ಎಂದು ಪೊಲೀಸರು ಹೇಳಿದರು.

ಕಳ್ಳತನದ ಬಗ್ಗೆ ದೂರು ನೀಡಿದ್ದ ಕೃಷ್ಣಪ್ಪ, ಕೆಲಸಗಾರನ ಮೇಲೆ ಅನು
ಮಾನವಿದೆ ಎಂದು ಹೇಳಿದ್ದರು. ಸುಬ್ರ
ಮಣಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡರು. ಅವರು ನೀಡಿದ್ದ ಮಾಹಿತಿಯಂತೆ ಉಳಿದ
ವರನ್ನು ಬಂಧಿಸಲಾಯಿತು ಎಂದರು.

ಆರೋಪಿಗಳ ಬಂಧನ: ನಿರ್ಮಾಣ ಹಂತದ ಕಟ್ಟಡದ ಬಳಿ ಹಾಕಿದ್ದ ಕಬ್ಬಿಣದ ಕಂಬಿಗಳನ್ನು ಕಳವು ಮಾಡಿದ್ದ ಆರೋಪದಡಿ ಮೂವರನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ. ವಿದ್ಯಾರಣ್ಯಪುರದ ಶಹಬಾಜ್ ಬೇಗ್‌, ಚಿಕ್ಕಬೆಟ್ಟಹಳ್ಳಿಯ ಮಹಮ್ಮದ್ ಸಾದಿಕ್ ಹಾಗೂ ಗೋರಿಪಾಳ್ಯದ ಶೇಕ್ ನಜೀರ್ ಬಂಧಿತರು. ಅವರಿಂದ ₹6 ಲಕ್ಷ ಮೌಲ್ಯದ ಕಬ್ಬಿಣದ ಕಂಬಿಗಳನ್ನು ಜಪ್ತಿ ಮಾಡ
ಲಾಗಿದೆ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.