ADVERTISEMENT

ಸಿಗ್ನಲ್‌ನಲ್ಲಿ ನಿಂತ ಕಾರುಗಳಿಗೆ ಲಾರಿ ಡಿಕ್ಕಿ : ಚಾಲಕ ಸಾವು

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2020, 21:43 IST
Last Updated 16 ಮಾರ್ಚ್ 2020, 21:43 IST
ಅಪಘಾತದಲ್ಲಿ ಜಖಂಗೊಂಡ ಕಾರು
ಅಪಘಾತದಲ್ಲಿ ಜಖಂಗೊಂಡ ಕಾರು   

ಬೆಂಗಳೂರು: ಇಂದಿರಾನಗರದ ಬಿನ್ನಮಂಗಲ ಸಿಗ್ನಲ್‌ನಲ್ಲಿ ನಿಂತಿದ್ದ ಎರಡು ಕಾರುಗಳಿಗೆ ಲಾರಿಯೊಂದು ಡಿಕ್ಕಿ ಹೊಡೆದಿದ್ದು, ಕಾರು ಚಾಲಕ ರಾಮಚಂದ್ರ (40) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

‘ಮೈಸೂರಿನ ರಾಮಚಂದ್ರ, ಕೆ.ಆರ್‌.ಪುರದಲ್ಲಿ ನೆಲೆಸಿದ್ದರು. ಕ್ಯಾಬ್ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಅಪಘಾತದ ಬಳಿಕ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ’ ಎಂದು ಹಲಸೂರು ಸಂಚಾರ ಪೊಲೀಸರು ಹೇಳಿದರು.

‘ಬೆಳಿಗ್ಗೆ 6.30ರ ಸುಮಾರಿಗೆ ಬಿನ್ನಮಂಗಲ ಸಿಗ್ನಲ್‌ನಲ್ಲಿ ಕೆಂಪು ದೀಪ ಹತ್ತಿತ್ತು. ಅದೇ ಮಾರ್ಗವಾಗಿ ಹೊರಟಿದ್ದ ಲಾರಿಯೊಂದು ಸಿಗ್ನಲ್‌ನಲ್ಲಿ ನಿಂತುಕೊಂಡಿತ್ತು. ಅದರ ಹಿಂದೆಯೇ ಎರಡು ಕಾರುಗಳು ನಿಂತಿದ್ದವು. ಅದೇ ರಸ್ತೆಯಲ್ಲೇ ವೇಗವಾಗಿ ಬಂದ ಸಿಲಿಂಡರ್‌ ಸಾಗಿಸುತ್ತಿದ್ದ ಲಾರಿಯೊಂದು ಕಾರುಗಳಿಗೆ ಡಿಕ್ಕಿ ಹೊಡೆದಿತ್ತು. ಕಾರುಗಳು ಎದುರಿಗಿದ್ದ ಮತ್ತೊಂದು ಲಾರಿಗೆ ತಾಗಿದ್ದವು’

ADVERTISEMENT

‘ಡಿಕ್ಕಿ ರಭಸಕ್ಕೆ ಕಾರಿನಲ್ಲೇ ಸಿಲುಕಿ ರಾಮಚಂದ್ರ ಮೃತಪಟ್ಟರು. ಇನ್ನೊಂದು ಕಾರಿನಲ್ಲಿ ಏರ್‌ಬ್ಯಾಗ್‌ ತೆರೆದುಕೊಂಡಿದ್ದರಿಂದ ಅದರ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆತ ತಲೆಮರೆಸಿಕೊಂಡಿದ್ದಾನೆ’ ಎಂದರು.

ಸರಗಳ್ಳತನ: ಪುತ್ತೂರಿನಿಂದ ಪರಾರಿ; ಮೈಸೂರಿನಲ್ಲಿ ಸಿಕ್ಕಿಬಿದ್ದ

ಬೆಂಗಳೂರು: ನಗರದ ಏಳು ಕಡೆಗಳಲ್ಲಿ ನಡೆದಿದ್ದ ಸರಗಳವು ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ.

‘ಬಂಟ್ವಾಳ ತಾಲ್ಲೂಕಿನ ಮೊಹಮ್ಮದ್ ರಫೀಕ್ (30), ಶಿವಮೊಗ್ಗದ ಇಮ್ರಾನ್ ಖಾನ್ (35) ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಅವರಿಂದ ₹ 17 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಬಸವನಗುಡಿ ಠಾಣೆ ವ್ಯಾಪ್ತಿಯ ಹಳೇ ಮಾರ್ಕೆಟ್ ರಸ್ತೆಯಲ್ಲಿ ಮಹಿಳೆಯೊಬ್ಬರ ಸರವನ್ನು ಕಿತ್ತೊಯ್ಯಲಾಗಿತ್ತು. ಆ ಸಂಬಂಧ ಮಹಿಳೆ ದೂರು ನೀಡಿದ್ದರು. ತನಿಖೆ ಕೈಗೊಂಡಿದ್ದ ವಿಶೇಷ ತಂಡ, ಮೈಸೂರಿನಲ್ಲಿದ್ದ ಆರೋಪಿಗಳನ್ನು ಬಂಧಿಸಿ ನಗರಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದೆ’ ಎಂದರು.

ತಪ್ಪಿಸಿಕೊಂಡಿದ್ದ ಆರೋಪಿ: ‘ಹಲವು ಸರಗಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಮೊಹಮ್ಮದ್ ರಫೀಕ್, ಜೈಲಿಗೂ ಹೋಗಿ ಬಂದಿದ್ದ. ಪುತ್ತೂರಿನಲ್ಲಿ ಸರಗಳವು ಮಾಡಿ ಪೊಲೀಸರಿಗೆ ಪುನಃ ಸಿಕ್ಕಿಬಿದ್ದಿದ್ದ. ನ್ಯಾಯಾಲಯಕ್ಕೆ ಕರೆದೊಯ್ಯುವ ವೇಳೆ ಪೊಲೀಸರಿಂದ ತಪ್ಪಿಸಿಕೊಂಡಿದ್ದ’ ಎಂದು ಮೂಲಗಳು ತಿಳಿಸಿವೆ.

‘ನಂತರ, ಬೆಂಗಳೂರಿನಲ್ಲಿ ಕೃತ್ಯ ಎಸಗಿ ಮೈಸೂರಿಗೆ ಹೋಗಿ ತಲೆಮರೆಸಿಕೊಂಡಿದ್ದ. ತನ್ನದೇ ಗ್ಯಾಂಗ್ ಕಟ್ಟಿಕೊಂಡು ಆರೋಪಿ ಕೃತ್ಯ ಎಸಗುತ್ತಿದ್ದ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.