ADVERTISEMENT

ಚಿಲ್ಲರೆ ಬೀಳಿಸಿ ₹35 ಸಾವಿರ ದೋಚಿದ ಕಳ್ಳಿಯರು!

​ಪ್ರಜಾವಾಣಿ ವಾರ್ತೆ
Published 16 ಜನವರಿ 2019, 18:48 IST
Last Updated 16 ಜನವರಿ 2019, 18:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬಸ್‌ನಲ್ಲಿ ಚಿಲ್ಲರೆ ಕಾಸು ಬೀಳಿಸಿ ಸಹಪ್ರಾಧ್ಯಾಪಕಿಯೊಬ್ಬರ ಗಮನ ಬೇರೆಡೆ ಸೆಳೆದ ಮಹಿಳೆಯರಿಬ್ಬರು, ₹ 12 ಸಾವಿರ ನಗದು ಹಾಗೂ ಎಟಿಎಂ ಕಾರ್ಡ್ ದೋಚಿದ್ದಾರೆ. ಅಲ್ಲದೆ, ಮುಂದಿನ ನಿಲ್ದಾಣದಲ್ಲೇ ಬಸ್ ಇಳಿದು ಎಟಿಎಂ ಕಾರ್ಡ್‌ನಿಂದ ₹ 23 ಸಾವಿರವನ್ನೂ ಡ್ರಾ ಮಾಡಿಕೊಂಡಿದ್ದಾರೆ.

ಈ ಸಂಬಂಧ ಮಂಡ್ಯದ ಶಂಕರನಗರ ನಿವಾಸಿ ಬಿ.ಆರ್.ಹೇಮಲತಾ ಅವರು ಬ್ಯಾಟರಾಯನಪುರ ಠಾಣೆಗೆ ದೂರು ಕೊಟ್ಟಿದ್ದಾರೆ. ‘ದೊಡ್ಡಬಳ್ಳಾಪುರದ ಆರ್‌ಎಲ್‌ಜೆಐಟಿ ಕಾಲೇಜಿನಲ್ಲಿ ಕೆಲಸ ಮಾಡುವ ನಾನು, ಮಂಡ್ಯಕ್ಕೆ ತೆರಳುವ ಸಲುವಾಗಿ ಜ.13ರ ಸಂಜೆ 4 ಗಂಟೆ ಸುಮಾರಿಗೆ ಸ್ಯಾಟಲೈಟ್ ನಿಲ್ದಾಣಕ್ಕೆ ಬಂದು ಕೆಎಸ್‌ಆರ್‌ಟಿಸಿ ಬಸ್ ಹತ್ತಿದ್ದೆ. ಈ ವೇಳೆ ಒಬ್ಬ ಮಹಿಳೆ ನನ್ನ ಪಕ್ಕದಲ್ಲಿ ಬಂದು ಕುಳಿತರೆ, ಇನ್ನೊಬ್ಬಾಕೆ ಪಕ್ಕದಲ್ಲೇ ನಿಂತುಕೊಂಡಿದ್ದಳು’ ಎಂದು ಹೇಮಲತಾ ವಿವರಿಸಿದ್ದಾರೆ.

‘ಬಸ್ ಸ್ವಲ್ಪ ದೂರ ಸಾಗುತ್ತಿದ್ದಂತೆಯೇ ಪಕ್ಕದಲ್ಲಿ ಕುಳಿತಿದ್ದವಳು ಚಿಲ್ಲರೆಯನ್ನು ಕೆಳಗೆ ಬೀಳಿಸಿದಳು. ನಾಣ್ಯಗಳನ್ನು ತೆಗೆದುಕೊಂಡುವಂತೆ ನನಗೇ ಕೇಳಿದಳು. ಆಗ ನಾನು ಕೆಳಗೆ ಬಗ್ಗಿ ಚಿಲ್ಲರೆಯನ್ನು ಆರಿಸಿ ಆಕೆಗೆ ಕೊಟ್ಟೆ. ಆ ನಂತರ ಮುಂದಿನ ನಿಲ್ದಾಣದಲ್ಲೇ ಅವರಿಬ್ಬರೂ ಇಳಿದುಕೊಂಡರು. ಬ್ಯಾಗ್ ನೋಡಿಕೊಂಡಾಗ ₹ 12 ಸಾವಿರ ನಗದು, ಎಟಿಎಂ ಕಾರ್ಡು ಹಾಗೂ ಟೈಟನ್ ವಾಚ್ ಕಾಣೆಯಾಗಿತ್ತು.’

ADVERTISEMENT

‘ಕೂಡಲೇ ಕಂಡಕ್ಟರ್‌ಗೆ ವಿಷಯ ತಿಳಿಸಿದೆ. ಅಷ್ಟರಲ್ಲಾಗಲೇ ಬಸ್ ತುಂಬ ದೂರಕ್ಕೆ ಬಂದಿದ್ದರಿಂದ ಅವರೂ ಅಸಹಾಯಕತೆ ವ್ಯಕ್ತಪಡಿಸಿದರು. 15 ನಿಮಿಷಗಳ ಬಳಿಕ ನನ್ನ ಖಾತೆಯಿಂದ ₹ 23 ಸಾವಿರ ಡ್ರಾ ಆಗಿರುವುದಾಗಿ ಮೊಬೈಲ್‌ಗೆ ಸಂದೇಶ ಬಂತು. ಕಾರ್ಡ್‌ ಮೇಲ್ ಪಿನ್‌ ನಂಬರ್ ಬರೆದಿದ್ದರಿಂದ ಆ ಮಹಿಳೆಯರೇ ಹಣ ಡ್ರಾ ಮಾಡಿದ್ದರು. ಅವರಿಬ್ಬರನ್ನೂ ಬಂಧಿಸಿ, ಸೂಕ್ತ ಕ್ರಮ ಜರುಗಿಸಬೇಕು’ ಎಂದು ಹೇಮಲತಾ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.