ಬೆಂಗಳೂರು: ಮನೆಯೊಂದರಲ್ಲಿ ಕಳವು ಮಾಡಿದ್ದ ಚಿನ್ನಾಭರಣವನ್ನು ಮಾರಲು ಬಂದಿದ್ದ ಆರೋಪಿಯೊಬ್ಬ ಕೆ.ಪಿ.ಅಗ್ರಹಾರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ದೇವರಚಿಕ್ಕನಹಳ್ಳಿ ನಿವಾಸಿ ನಾಗರಾಜ್ (24) ಬಂಧಿತ ಆರೋಪಿ. ಆತನಿಂದ,ಏಳು ಜೊತೆ ಚಿನ್ನದ ಓಲೆ ಹಾಗೂ 3 ಚಿನ್ನದ ಸರಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
‘ಬಿಡದಿಯ ಸೇಂಟ್ ಥಾಮಸ್ ಶಾಲೆ ಬಳಿಯ ಮನೆಯೊಂದರ ಬೀಗ ಒಡೆದು ಒಳ ನುಗ್ಗಿದ್ದ ಆರೋಪಿ, ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣ ಕದ್ದಿದ್ದ. ಆ ಬಗ್ಗೆ ಆತ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದರು.
‘ಆಭರಣಗಳನ್ನು ಮಾರಲು ಇದೇ 2ರಂದು ಮಾಗಡಿ ಮುಖ್ಯರಸ್ತೆಗೆ ಬಂದಿದ್ದ ಆರೋಪಿ, ಮಹಾವೀರ್ ಜ್ಯುವೆಲ್ಸ್ ಮಳಿಗೆ ಬಳಿ ನಿಂತಿದ್ದ. ಆತನ ವರ್ತನೆ ಬಗ್ಗೆ ಅನುಮಾನಗೊಂಡ ಗಸ್ತಿನಲ್ಲಿದ್ದ ಹೆಡ್ ಕಾನ್ಸ್ಟೆಬಲ್ ಶರಣಪ್ಪ ಹಾಗೂ ಕಾನ್ಸ್ಟೆಬಲ್ ಅರ್ಜುನ್ ಕಾಂಬಳೆ, ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದರು. ಅವಾಗಲೇ ಆರೋಪಿ, ಕಳ್ಳತನ ಮಾಡಿದ್ದ ಸಂಗತಿ ಬಾಯ್ಬಿಟ್ಟ’ ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.