ಬೆಂಗಳೂರು: ಬಾಡಿಗೆ ಕೇಳುವ ನೆಪದಲ್ಲಿ ಮನೆಗಳಿಗೆ ಹೋಗಿ ಕಳ್ಳತನ ಮಾಡುತ್ತಿದ್ದ ಆರೋಪದಡಿ ರೌಡಿ ವಿನಯ್ ಹಾಗೂ ಆತನ ಸ್ನೇಹಿತೆ ಕೀರ್ತನಾಳನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ರಾಜಾಜಿನಗರದ ಠಾಣೆಯ ರೌಡಿ ಪಟ್ಟಿಯಲ್ಲಿ ವಿನಯ್ ಹೆಸರಿದೆ. ಆತ, ಕೀರ್ತನಾ ಜೊತೆ ಹಲವು ದಿನಗಳಿಂದ ಸ್ನೇಹ ಹೊಂದಿದ್ದ. ಅವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರೆಂಬ ಮಾಹಿತಿ ಇದೆ’ ಎಂದು ಪೊಲೀಸರು ಹೇಳಿದರು.
‘ಚಂದ್ರಾಲೇಔಟ್ ಠಾಣೆ ವ್ಯಾಪ್ತಿಯ ಮನೆಯೊಂದಕ್ಕೆ ಬಾಡಿಗೆ ಕೇಳುವ ನೆಪದಲ್ಲಿ ಆರೋಪಿಗಳು ಇತ್ತೀಚೆಗೆ ಹೋಗಿದ್ದರು. ಮನೆಯಲ್ಲಿದ್ದ ಲ್ಯಾಪ್ಟಾಪ್ ಕದ್ದುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡಾಗ ಆರೋಪಿಗಳು ಸಿಕ್ಕಿಬಿದ್ದರು’ ಎಂದೂ ತಿಳಿಸಿದರು.
‘ರೌಡಿ ವಿನಯ್ ವಿರುದ್ಧ ರಾಜಾಜಿನಗರ ಹಾಗೂ ಬಸವೇಶ್ವರನಗರ ಠಾಣೆಯಲ್ಲಿ ಏಳು ಪ್ರಕರಣಗಳು ದಾಖಲಾಗಿದ್ದವು. 10ನೇ ತರಗತಿ ಅನುತ್ತೀರ್ಣಳಾಗಿದ್ದ ಕೀರ್ತನಾ, ಆತನ ಜೊತೆ ಓಡಾಡುತ್ತಿದ್ದಳು. ಇಬ್ಬರೂ ಸೇರಿ ಕೃತ್ಯ ಎಸಗುತ್ತಿದ್ದರೆಂಬ ಮಾಹಿತಿ ಇದ್ದು, ತನಿಖೆ ಮುಂದುವರಿದಿದೆ. ಸದ್ಯ ಅವರಿಬ್ಬರು ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದೂ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.