ಬೆಂಗಳೂರು: ಸುರಂಗ ಕೊರೆದು ಅದರ ಮೂಲಕವೇ ಚಿನ್ನಾಭರಣ ಮಳಿಗೆಯೊಳಗೆ ನುಸುಳಿ ಕಳವು ಮಾಡುತ್ತಿದ್ದ ನೇಪಾಳಿ ಗ್ಯಾಂಗ್ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದೆ.
ವೈಟ್ಫೀಲ್ಡ್ ಠಾಣೆ ವ್ಯಾಪ್ತಿಯಲ್ಲಿರುವ ಮಾತಾಜಿ ಜ್ಯುವೆಲರ್ಸ್ ಮಳಿಗೆಯಲ್ಲಿ ಇದೇ 5ರಂದು ಚಿನ್ನಾಭರಣ ಹಾಗೂ ಬೆಳ್ಳಿ ಸಾಮಗ್ರಿಗಳನ್ನು ಕಳವು ಮಾಡಿದ್ದ ಆರೋಪದಡಿ ನೇಪಾಳದವರು ಸೇರಿ ಆರು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
‘ನೇಪಾಳ ಕೋಲ್ಪುರದ ಅಮರ್ಸಿಂಗ್ ಅಲಿಯಾಸ್ ಕಮಲ್ (26), ಗಣೇಶ್ ಬಹದ್ದೂರ್ (32), ಕೃಷ್ಣರಾಜ್ ಜಯಶಿ (33), ಚರಣ್ ಸಿಂಗ್ (29) ಹಾಗೂ ಗ್ಯಾಂಗ್ ಕೃತ್ಯಕ್ಕೆ ಸ್ಥಳೀಯವಾಗಿ ಸಹಕರಿಸಿದ್ದ ಗಂಗೊಂಡನಹಳ್ಳಿಯ ಸಲೀಂಪಾಷಾ (23), ಶಾಹಿದ್ (22) ಬಂಧಿತರು. ಆರೋಪಿಗಳಿಂದ ₹ 30 ಲಕ್ಷ ಮೌಲ್ಯದ ಚಿನ್ನಾಭರಣ, ಟಿ.ವಿ., ಮೊಬೈಲ್ಗಳು ಹಾಗೂ ಕ್ಯಾಮೆರಾಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಹಲವು ವರ್ಷಗಳಿಂದ ಆರೋಪಿಗಳು ಕಳ್ಳತನ ಎಸಗುತ್ತಿದ್ದರು. ಕಳ್ಳತನದಿಂದ ಬಂದ ಹಣದಲ್ಲೇ ಆರೋಪಿಗಳು ಸ್ವಂತ ಊರಿನಲ್ಲಿ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದರು. ಆರೋಪಿಯೊಬ್ಬ ಸುಸಜ್ಜಿತ ಚಪ್ಪಲಿ ಅಂಗಡಿ ಇಟ್ಟುಕೊಂಡಿದ್ದ. ಹಣದ ಅಗತ್ಯತೆ ಬಿದ್ದಾಗಲೆಲ್ಲ ದೊಡ್ಡ ಮಳಿಗೆಗಳಿಗೆ ಆರೋಪಿಗಳು ಕನ್ನ ಹಾಕುತ್ತಿದ್ದರು’ ಎಂದೂ ತಿಳಿಸಿದರು.
ಸುಸಜ್ಜಿತ ವ್ಯವಸ್ಥೆಯೊಂದಿಗೆ ಕೃತ್ಯ; ‘ಆರೋಪಿಗಳ ಬಳಿ ಇದ್ದ ಆಟೊ, ಗ್ಯಾಸ್ ಕಟರ್, ಗ್ಯಾಸ್ ಸಿಲಿಂಡರ್, ಸರಳು ಕತ್ತರಿಸುವ ಯಂತ್ರ, ಬ್ಲೇಡ್ ಹಾಗೂ ಸುರಂಗ ಕೊರೆಯಲು ಬೇಕಿದ್ದ ರಾಡುಗಳನ್ನು ಜಪ್ತಿ ಮಾಡಲಾಗಿದೆ. ಸುಸಜ್ಜಿತ ವ್ಯವಸ್ಥೆಯೊಂದಿಗೆ ಆರೋಪಿಗಳು ಕೃತ್ಯ ಎಸಗುತ್ತಿದ್ದರು’ ಎಂದು ಪೊಲೀಸರು ಹೇಳಿದರು
‘ನಗರಕ್ಕೆ ಬಂದು ಹೋಟೆಲ್ ಹಾಗೂ ಬಾಡಿಗೆ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದ ಆರೋಪಿಗಳು, ಸ್ಥಳೀಯ ವ್ಯಕ್ತಿಗಳ ಸಹಾಯದಿಂದ ಮಳಿಗೆಗಳನ್ನು ಗುರುತಿಸುತ್ತಿದ್ದರು. ನಂತರ, ಸಂಚು ರೂಪಿಸಿ ಮಳಿಗೆಯೊಳಗೆ ಹೋಗುವಂತೆ ಸುರಂಗ ಕೊರೆಯುತ್ತಿದ್ದರು. ನಂತರ, ಸುರಂಗದ ಮೂಲಕವೇ ಆರೋಪಿಗಳು ಒಬ್ಬೊಬ್ಬರಾಗಿ ಮಳಿಗೆಗೆ ನುಸುಳುತ್ತಿದ್ದರು. ಲಾಕರ್ ಹಾಗೂ ಇತರೆ ಭದ್ರತಾ ಪೆಟ್ಟಿಗೆಗಳನ್ನು ಗ್ಯಾಸ್ ಕಟರ್ನಿಂದ ಕತ್ತರಿಸುತ್ತಿದ್ದರು’ ಎಂದೂ ತಿಳಿಸಿದರು.
‘ವೈಟ್ಫೀಲ್ಡ್ನ ಮಾತಾಜಿ ಜ್ಯುವೆಲರ್ಸ್ ಮಳಿಗೆಯಲ್ಲಿ ಆರೋಪಿಗಳು ಎಸಗಿದ್ದ ಕೃತ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು’ ಎಂದೂ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.