ADVERTISEMENT

ಚಿನ್ನಾಭರಣ ಕದ್ದ ತಂಡದ ಸದಸ್ಯನ ಬಂಧನ

ಗಮನ ಬೇರೆಡೆ ಸೆಳೆದು ಕದಿಯುತ್ತಿದ್ದ ಗ್ಯಾಂಗ್

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2021, 18:52 IST
Last Updated 20 ಮಾರ್ಚ್ 2021, 18:52 IST
ಆರೋಪಿಯಿಂದ ಜಪ್ತಿ ಮಾಡಿರುವ ಚಿನ್ನದ ಆಭರಣಗಳು. ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಹಾಗೂ ಅಧಿಕಾರಿಗಳು ಇದ್ದಾರೆ.
ಆರೋಪಿಯಿಂದ ಜಪ್ತಿ ಮಾಡಿರುವ ಚಿನ್ನದ ಆಭರಣಗಳು. ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಹಾಗೂ ಅಧಿಕಾರಿಗಳು ಇದ್ದಾರೆ.   

ಬೆಂಗಳೂರು: ಬ್ಯಾಂಕ್‌ಗಳು, ಒಡವೆ ಅಂಗಡಿಗಳ ಬಳಿ ಬರುವ ಜನರನ್ನು ಹಿಂಬಾಲಿಸಿ, ಅವರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಹಾಗೂ ಬ್ಯಾಗ್‌ಗಳನ್ನು ಕದಿಯುತ್ತಿದ್ದ ಆಂಧ್ರಪ್ರದೇಶದ ಕಳ್ಳರ ಗ್ಯಾಂಗ್‌ನಲ್ಲಿದ್ದ ಒಬ್ಬನನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಚೆಲ್ಲಾ ಪ್ರಭುದಾಸ್‌ (27) ಬಂಧಿತ ಆರೋಪಿ. ತಂಡದಲ್ಲಿ ಈತನ ತಮ್ಮ ಅಲೆಗ್ಸಾಂಡರ್, ನಾಯಕ ಪೇಟಲ ಪ್ರತೀಷ್ ಸೇರಿ ಒಟ್ಟು ಏಳು ಮಂದಿ ಇರುವುದಾಗಿ ಮಾಹಿತಿ ಸಿಕ್ಕಿದೆ.

ಮಾ.19ರಂದು ಕೋಗಿಲು ಮುಖ್ಯರಸ್ತೆಯಲ್ಲಿದ್ದ ಆಭರಣದ ಅಂಗಡಿ ಬಳಿ ವ್ಯಕ್ತಿಯೊಬ್ಬರ ಕೈಯಲ್ಲಿದ್ದ ಬಾಕ್ಸ್‌ನಿಂದ ಆಭರಣ ತಪ್ಪಿ ಕೆಳಗೆ ಬಿದ್ದಿತ್ತು. ಅದನ್ನು ಆತ ಹೆಕ್ಕಿಕೊಂಡಿದ್ದನ್ನು ಆರೋಪಿಗಳುಗಮನಿಸಿದ್ದರು. ವಾಹನದಲ್ಲಿ ತೆರಳುತ್ತಿದ್ದ ಆ ವ್ಯಕ್ತಿಯನ್ನು ಬೈಕ್‌ನಲ್ಲಿ ಹಿಂಬಾಲಿಸಿದ್ದರು. ಹೆಗಡೆನಗರದ ಬಳಿ ಮೂತ್ರವಿಸರ್ಜನೆಗೆಂದು ಆತ ತೆರಳಿದಾಗ ಆರೋಪಿಗಳು ಆಭರಣಗಳಿದ್ದ ಬಾಕ್ಸ್‌ ಕದ್ದಿದ್ದರು. ಬಳಿಕ ಆಂಧ್ರಪ್ರದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದರು.

ADVERTISEMENT

‘ಆಭರಣದ ಮಾಲೀಕ ನೀಡಿದ್ದ ದೂರಿನನ್ವಯ ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರು ಕೃತ್ಯ ನಡೆದ ಸ್ಥಳದಿಂದ ನೆಲ್ಲೂರುವರೆಗೆ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದರು. ಈ ವೇಳೆ ಆರೋಪಿಗಳು ಕೆ.ಆರ್.ಪುರ, ಹೊಸಕೋಟೆ, ಕೋಲಾರ ಮಾರ್ಗವಾಗಿ ಆಂಧ್ರಪ್ರದೇಶಕ್ಕೆ ಹೋಗಿರುವುದು ತಿಳಿಯಿತು’ ಎಂದು ಪೊಲೀಸರು ತಿಳಿಸಿದರು.

‘ಬಂಧಿತ ಆರೋಪಿಯಿಂದ ₹24 ಲಕ್ಷ ಬೆಲೆಬಾಳುವ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಮೂರು ಬೈಕ್‌ಗಳನ್ನು ಜಪ್ತಿ ಜಪ್ತಿ ಮಾಡಲಾಗಿದೆ.ಉಳಿದ ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.