ಬೆಂಗಳೂರು: ಕೆ.ಜಿ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿರುವ ಅಪಾರ್ಟ್ಮೆಂಟ್ ಸಮುಚ್ಚಯವೊಂದರ ಫ್ಲ್ಯಾಟ್ನಲ್ಲಿ ಕಳ್ಳತನ ನಡೆದಿದ್ದು, ಅಪಾರ್ಟ್ಮೆಂಟ್ ಭದ್ರತಾ ಸಿಬ್ಬಂದಿ ಸಂಜಯ್ ಹಾಗೂ ಆತನ ಸಹಚರರ ಮೇಲೆ ಪ್ರಕರಣ ದಾಖಲಾಗಿದೆ.
‘ಸಾಫ್ಟ್ವೇರ್ ಎಂಜಿನಿಯರ್ ದೀಪಕ್ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ. ಕೃತ್ಯದ ಬಗ್ಗೆ ಅವರ ತಂದೆ ಶ್ರೀನಿವಾಸ್ ದೂರು ನೀಡಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಹೊಸ ವರ್ಷಾಚರಣೆ ಪ್ರಯುಕ್ತ ದೀಪಕ್ ಅವರು ಕುಟುಂಬ ಸಮೇತ ಜ. 1ರಂದು ತಿರುಪತಿಗೆ ಹೊರಟಿದ್ದರು. ಆ ಬಗ್ಗೆ ಭದ್ರತಾ ಸಿಬ್ಬಂದಿಗೆ
ವಿಷಯ ತಿಳಿಸಿದ್ದರು. ‘ಮನೆ ಕಡೆ ಜೋಪಾನ’ ಎಂದು ಸಹ ಸೂಚಿಸಿದ್ದರು. ಅದೇ ದಿನ ರಾತ್ರಿ ಸಹಚರರನ್ನು ಕರೆಸಿಕೊಂಡಿದ್ದ ಆರೋಪಿ ಸಂಜಯ್, ಮನೆ ಬೀಗ ಮುರಿದು 709 ಗ್ರಾಂ ಚಿನ್ನಾಭರಣ ಹಾಗೂ ₹ 3 ಲಕ್ಷ ನಗದು ಕದ್ದು ಪರಾರಿಯಾಗಿದ್ದಾನೆ. ಆರೋಪಿ ಕೃತ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ’ ಎಂದೂ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.