ಬೆಂಗಳೂರು: ಬೀಗ ಹಾಕಿದ ಮನೆಗಳನ್ನು ಹಗಲು ವೇಳೆಯಲ್ಲಿ ಗುರುತಿಸಿ ರಾತ್ರಿ ನುಗ್ಗಿ ಕಳವು ಮಾಡುತ್ತಿದ್ದ ಕಳ್ಳನನ್ನು ಬಂಧಿಸಿರುವ ಸುದ್ದಗುಂಟೆ ಪಾಳ್ಯ ಪೊಲೀಸರು, ಆರೋಪಿಯಿಂದ ₹ 12 ಲಕ್ಷ ಮೌಲ್ಯದ ಕಳವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಆರ್. ಟಿ. ನಗರದ ರಹಮತ್ ನಗರ ನಿವಾಸಿ ಸಯ್ಯದ್ ಮಸೂದ್ (36) ಬಂಧಿತ ಆರೋಪಿ. ಬಂಧಿತನಿಂದ ₹ 6 ಲಕ್ಷ ನಗದು, 171 ಗ್ರಾಂ ಚಿನ್ನಾಭರಣ, ದ್ವಿಚಕ್ರ ವಾಹನ, ಒಂದು ಮೈಕ್ರೊ ಒವೆನ್, ಎರಡು ಸೀರೆ, ಎರಡು ಬೆಡ್ ಶೀಟ್, ಆಸ್ತಿ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಿಟಿಎಂ ಲೇಔಟ್ನ ಕೆಇಬಿ ಕಾಲೊನಿಯ ತಮ್ಮ ಮನೆಯಲ್ಲಿ ನಡೆದ ಕಳವು ಬಗ್ಗೆ ಅಬ್ದುಲ್ ರಶೀದ್ ಮೇಕ್ರಿ ಎಂಬುವರು ಸುದ್ದಗುಂಟೆ ಪಾಳ್ಯ ಠಾಣೆಯಲ್ಲಿ ದೂರು ನೀಡಿದ್ದರು. ಆರೋಪಿಯ ಪತ್ತೆಗೆ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ಕಂಪ್ಯೂಟರ್ ಮಳಿಗೆ ಮಾಲೀಕನ ಸುಲಿಗೆ: ಬಸವನಗುಡಿ ಇ.ಎ.ಟಿ ರಸ್ತೆಯಲ್ಲಿರುವ ‘ಮಂಜುನಾಥ್ ಡಿಟಿಪಿ’ ಕಂಪ್ಯೂಟರ್ ಮಳಿಗೆ ಮಾಲೀಕನಿಗೆ ಮಾರಕಾಸ್ತ್ರ ತೋರಿಸಿ ಸುಲಿಗೆ ಮಾಡಲಾಗಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
‘ಮೇ 16ರಂದು ನಡೆದಿರುವ ಕೃತ್ಯ ಸಂಬಂಧ ಮಾಲೀಕ ಎಸ್. ಮೋಹನ್ (51) ಎಂಬುವರು ದೂರು ನೀಡಿದ್ದಾರೆ. ಮೂವರು ಅಪರಿಚಿತರು ಕೃತ್ಯ ಎಸಗಿದ್ದು, ಅವರ ಪತ್ತೆಗಾಗಿ ತನಿಖೆ ಮುಂದುವರಿದಿದೆ’ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.