ADVERTISEMENT

ನಕಲಿ ಖಾತೆ ತೆರೆಯಲು ನೆರವು: 13 ಮಂದಿ ಸೆರೆ

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೈಬರ್ ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 22:22 IST
Last Updated 6 ಫೆಬ್ರುವರಿ 2026, 22:22 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ಬೆಂಗಳೂರು: ಹಣದ ಆಮಿಷವೊಡ್ಡಿ ಸಾರ್ವಜನಿಕರ ಬ್ಯಾಂಕ್ ಖಾತೆಗಳ ವಿವರ ಪಡೆದು, ಸೈಬರ್ ವಂಚಕರಿಗೆ ನೀಡುತ್ತಿದ್ದವರ ವಿರುದ್ಧ ಕಾರ್ಯಾಚರಣೆ ಆರಂಭಿಸಿರುವ ಸಿಐಡಿಯ ‘ಸೈಬರ್ ಕಮಾಂಡ್‌ ಘಟಕ’ ಅಧಿಕಾರಿಗಳು ರಾಜ್ಯದಾದ್ಯಂತ 13 ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೇ, ಬ್ಯಾಂಕ್‌ನಲ್ಲಿ ವಂಚಕರು ತೆರೆದಿರುವ 42 ಸಾವಿರಕ್ಕೂ ಹೆಚ್ಚು ನಕಲಿ ಖಾತೆಗಳನ್ನೂ (ಮ್ಯೂಲ್‌ ಅಕೌಂಟ್) ಪತ್ತೆಹಚ್ಚಿದ್ದಾರೆ.  

ರಾಜ್ಯದ ವಿವಿಧ ಜಿಲ್ಲಾ ಸೆನ್‌ ಪೊಲೀಸ್ ಠಾಣೆಗಳಲ್ಲಿ 17 ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಸೈಬರ್‌ ಪೊಲೀಸರು, ನಕಲಿ ಖಾತೆಗಳನ್ನು ತೆರೆಯಲು ನೆರವು ನೀಡುತ್ತಿದ್ದ 13 ಮಂದಿಯನ್ನು ಹೆಚ್ಚಿನ ತನಿಖೆಗಾಗಿ ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಬೆಂಗಳೂರು, ಚಿತ್ರದುರ್ಗ, ಗದಗ, ಕೊಪ್ಪಳ, ಹುಬ್ಬಳ್ಳಿ– ಧಾರವಾಡ, ಹಾಸನ, ಮಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಗುರುವಾರ ಹಾಗೂ ಶುಕ್ರವಾರ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಈ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

‘ಸೈಬರ್ ಅಪರಾಧ ಎಸಗುವ ವಂಚಕರು, ಸಾರ್ವಜನಿಕರಿಂದ ದೋಚುವ ಹಣವನ್ನು ‘ಮ್ಯೂಲ್ ಅಕೌಂಟ್​​’ಗಳ ಮೂಲಕ ವರ್ಗಾವಣೆ ಮಾಡಿಕೊಳ್ಳುತ್ತಿದ್ದಾರೆ. ಬ್ಯಾಂಕ್‌ನಲ್ಲಿ ತೆರೆದಿರುವ ನಕಲಿ ಖಾತೆಗಳನ್ನು ಪತ್ತೆ ಹಚ್ಚಲು, ರಾಜ್ಯದಲ್ಲಿ ಎರಡು ದಿನಗಳಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ರಾಜ್ಯದಲ್ಲಿ 42 ಸಾವಿರ ಮ್ಯೂಲ್ ಅಕೌಂಟ್​​ಗಳಿವೆ ಎಂಬುದು ತನಿಖೆಯಿಂದ ಗೊತ್ತಾಗಿದೆ. ಪ್ರಾಥಮಿಕ ಹಂತದ ಕಾರ್ಯಾಚರಣೆಯಲ್ಲಿ 158 ನಕಲಿ ಖಾತೆಗಳಲ್ಲಿರುವ ವಿಳಾಸ ಕಲೆ ಹಾಕಲಾಗಿದೆ. ಅವರು ತಮ್ಮ ದಾಖಲೆಗಳನ್ನು ಯಾರಿಗೆ ನೀಡಿದ್ದರು ಎಂಬುದನ್ನು ಪತ್ತೆಹಚ್ಚುವಂತೆ 29 ಸೆನ್‌ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಹಾಗೂ ಪಿಎಸ್‌ಐಗಳಿಗೆ ಸೂಚನೆ ನೀಡಲಾಗಿದೆ’ ಎಂದು ಮೂಲಗಳು ಹೇಳಿವೆ. 

ಕಾರ್ಮಿಕರ ದಾಖಲೆ ಪಡೆಯುವ ವಂಚಕರು: ಆನ್‌ಲೈನ್‌ ಮೂಲಕ ವಂಚನೆ ಮಾಡಿದ ಹಣವನ್ನು ವರ್ಗಾಯಿಸಲು ವಂಚಕರು ಹೆಚ್ಚು ನಕಲಿ ಖಾತೆ ಬಳಸುತ್ತಾರೆ. ಪಂಜಾಬ್‌, ಉತ್ತರ ಪ್ರದೇಶ, ಬಿಹಾರ ಹಾಗೂ ಕರ್ನಾಟಕದ ಕಾರ್ಮಿಕರ ಆಧಾರ್ ಕಾರ್ಡ್ ಪಡೆದು, ಅವರ ಹೆಸರಿನಲ್ಲಿ ಬ್ಯಾಂಕ್‌ ಖಾತೆ ತೆರೆಯಲಾಗುತ್ತಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

‘ರಾಜ್ಯದ 29 ಜಿಲ್ಲೆಗಳಲ್ಲಿ ಎರಡು ದಿನ ಕಾರ್ಯಾಚರಣೆ ನಡೆಸಲಾಯಿತು. ಈ ರೀತಿಯ ಕಾರ್ಯಾಚರಣೆ ಮುಂದುವರಿಯಲಿದೆ’ ಎಂದು ಸೈಬರ್ ಕಮಾಂಡ್ ಸೆಂಟರ್‌ ಡಿಜಿಪಿ ಪ್ರಣವ್ ಮೊಹಾಂತಿ ತಿಳಿಸಿದರು. 

ಹೇಗೆ ನಡೆಯುತ್ತಿದೆ ವಂಚನೆ?
‘ಖಾತೆದಾರರಿಗೆ ಅರಿವಿಗೆ ಬಾರದಂತೆ ಅಥವಾ ವಿವಿಧ ರೀತಿಯ ಆಮಿಷವೊಡ್ಡಿ, ಸಾರ್ವಜನಿಕರ ಬ್ಯಾಂಕ್ ಖಾತೆಗಳ ವಿವರಗಳನ್ನು ಸೈಬರ್ ವಂಚಕರು ಪಡೆದುಕೊಳ್ಳುತ್ತಾರೆ. ಸೈಬರ್ ವಂಚನೆ ನಡೆಸಿ, ಆ ಹಣವನ್ನು ನೈಜ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಳ್ಳುತ್ತಾರೆ. ಹಣ ವರ್ಗಾವಣೆಯ ಮಾಹಿತಿ ಅಸಲಿ ಖಾತೆದಾರರ ಅರಿವಿಗೇ ಬರುವುದಿಲ್ಲ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು. ‘ವಂಚನೆ ಬಗ್ಗೆ ಪ್ರಕರಣ ದಾಖಲಾದಾಗ ಹಣ ವರ್ಗಾವಣೆ ಆಧರಿಸಿ, ನೈಜ ಖಾತೆದಾರರನ್ನು ಪತ್ತೆ ಹಚ್ಚಿ ಮಾಹಿತಿ ನೀಡಿದಾಗಷ್ಟೇ ತನ್ನ ಖಾತೆ ದುರ್ಬಳಕೆ ಆಗಿರುವ ವಿಚಾರ ಅಸಲಿ ಬ್ಯಾಂಕ್‌ ಖಾತೆದಾರರಿಗೆ ಗೊತ್ತಾಗುತ್ತಿದೆ. ಕೆಲವು ಖಾತೆದಾರರು ಕಮಿಷನರ್ ರೂಪದಲ್ಲಿ ಹಣ ಪಡೆದು ತಮ್ಮ ದಾಖಲೆಗಳನ್ನೂ ವಂಚಕರಿಗೆ ನೀಡಿರುವುದು ಪತ್ತೆಯಾಗಿದೆ’ ಎಂದೂ ಅವರು ವಿವರಿಸಿದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.