ಬೆಂಗಳೂರು: ನಗರದ ಸಾಫ್ಟ್ವೇರ್ ಉದ್ಯೋಗಿಯೊಬ್ಬರಿಗೆ ‘ಡಿಜಿಟಲ್ ಅರೆಸ್ಟ್‘ ಮೂಲಕ ಬೆದರಿಸಿ ₹11.83 ಕೋಟಿ ವಸೂಲಿ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಈಶಾನ್ಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸೂರತ್ ನಿವಾಸಿಗಳಾದ ಕರಣ್, ತರುಣ್ ನಟಾನಿ ಹಾಗೂ ಧವಲ್ ಶಾ ಬಂಧಿತರು.
ಆರೋಪಿಗಳು ನಗರದ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್ವೇರ್ ಎಂಜಿನಿಯರ್ ವಿಜಯಕುಮಾರ್ ಅವರಿಗೆ ಒಂದು ತಿಂಗಳು ಪೀಡಿಸಿ ವಿವಿಧ ಖಾತೆಗಳಿಗೆ ಹಣವನ್ನು ವರ್ಗಾಯಿಸಿಕೊಂಡಿದ್ದರು.
‘ವಿಜಯಕುಮಾರ್ ಅವರ ಕಂಪನಿಯು ತನ್ನ ₹50 ಲಕ್ಷ ಮೌಲ್ಯದ ಒಂದು ಷೇರನ್ನು ಆತನಿಗೆ ನೀಡಿತ್ತು. ಆ ಷೇರಿನ ಪ್ರಸ್ತುತ ಮೌಲ್ಯ ₹12 ಕೋಟಿ ಇರುವುದನ್ನು ತಿಳಿದುಕೊಂಡಿದ್ದ ಆರೋಪಿಗಳು, ಪ್ರತ್ಯೇಕ ನಂಬರ್ಗಳಿಂದ ಅವರಿಗೆ ಕರೆ ಮಾಡಿ ತಾವು ಇ.ಡಿ, ಕಸ್ಟಮ್ಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡಿದ್ದರು’ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
‘ನಿಮ್ಮ ಖಾತೆಯಲ್ಲಿ ಅಕ್ರಮವಾಗಿ ಹಣದ ವಹಿವಾಟು ನಡೆದಿರುವ ಕಾರಣ ತನಿಖೆಗಾಗಿ ಕೆವೈಸಿ ದಾಖಲೆಗಳನ್ನು ನೀಡಬೇಕೆಂದು ಟೆಕಿಯಿಂದ ಪಡೆದುಕೊಂಡಿದ್ದರು. ಬಳಿಕ ಹಣ ಅಕ್ರಮ ವರ್ಗಾವಣೆ ಆರೋಪದಲ್ಲಿ ನೆರವಾಗುತ್ತೇವೆ ಎಂದು ನಂಬಿಸಿ, ಒಟ್ಟು ಒಂಬತ್ತು ಖಾತೆಗಳಿಗೆ ಹಣ ವರ್ಗಾಯಿಸಿಕೊಂಡಿದ್ದರು’ ಎಂದು ಪೊಲೀಸರು ತಿಳಿಸಿದರು.
ಹಣ ವರ್ಗಾವಣೆಯಾದ ಖಾತೆಗಳ ಜಾಡು ಹಿಡಿದು ಪೊಲೀಸರು ತನಿಖೆ ನಡೆಸಿದಾಗ ಸೂರತ್ನ ಚಿನ್ನದ ವ್ಯಾಪಾರಿಯೊಬ್ಬರ ಖಾತೆಗೆ ₹7.5 ಕೋಟಿ ವರ್ಗಾವಣೆಯಾಗಿರುವುದು ಗೊತ್ತಾಯಿತು. ಸೂರತ್ಗೆ ತೆರಳಿದ ಪೊಲೀಸರು ಚಿನ್ನದ ವ್ಯಾಪಾರಿಯ ಬಳಿ ತೆರಳಿ ಮಾಹಿತಿ ಸಂಗ್ರಹಿಸಿದಾಗ, ಆರೋಪಿಗಳು ವಂಚನೆಯ ಹಣದಲ್ಲಿ ಚಿನ್ನಾಭರಣ ಖರೀದಿಸಿದ್ದರು ಎಂಬುದು ಪತ್ತೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.