ADVERTISEMENT

ಪಿಎಸ್‌ಐ ಸೇರಿ ಮೂವರು ಅಮಾನತು

₹ 15 ಲಕ್ಷ ವಂಚನೆ: ಕಮಿಷನ್ ಆಸೆಗೆ ಠಾಣೆಯಲ್ಲಿ ಸಂಧಾನ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2023, 20:17 IST
Last Updated 31 ಮಾರ್ಚ್ 2023, 20:17 IST
   

ಬೆಂಗಳೂರು: ವ್ಯಕ್ತಿಯೊಬ್ಬರನ್ನು ಅಕ್ರಮವಾಗಿ ಬಂಧಿಸಿ 36 ಗಂಟೆ ಠಾಣೆಯಲ್ಲಿರಿಸಿ ಕರ್ತವ್ಯ ಲೋಪ ಎಸಗಿದ್ದ ಆರೋಪದಡಿ ಪುಲಿಕೇಶಿನಗರ ಠಾಣೆಯ ಪಿಎಸ್‌ಐ ಸೇರಿದಂತೆ ಮೂವರು ಪೊಲೀಸರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಪಿಎಸ್‌ಐ ರುಮಾನ್ ಪಾಷಾ, ಕಾನ್‌ಸ್ಟೆಬಲ್‌ಗಳಾದ ಲೇಪಾಕ್ಷಪ್ಪ ಹಾಗೂ ಲಕ್ಷ್ಮಣ್ ಅಮಾನತ್ತಾದವರು.

‘ಅಕ್ರಮ ಬಂಧನ ಸಂಬಂಧ ಸಂತ್ರಸ್ತ ಕೊಂಡಪ್ಪ ಎಂಬುವವರು ದೂರು ನೀಡಿದ್ದರು. ಪ್ರಾಥಮಿಕ ತನಿಖೆ ನಡೆಸಿದ್ದ ಪಶ್ಚಿಮ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ ಅವರು ಆರೋಪಿತ ಪೊಲೀಸರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಮೂವರ ವಿರುದ್ಧ ಇಲಾಖೆ ವಿಚಾರಣೆಗೂ ಸೂಚಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

ಕಮಿಷನ್ ಆಸೆಗೆ ಸಂಧಾನ: ‘ದೂರುದಾರ ಕೊಂಡಪ್ಪ, ರೈಸ್ ಪುಲ್ಲಿಂಗ್ ದಂಧೆಯಲ್ಲಿ ತೊಡಗಿದ್ದರೆಂಬ ಮಾಹಿತಿ ಇದೆ. ವ್ಯಕ್ತಿಯೊಬ್ಬರನ್ನು ವಂಚಿಸಿ ₹ 15 ಲಕ್ಷ ಪಡೆದಿದ್ದರು. ಹಣ ಕಳೆದುಕೊಂಡಿದ್ದ ವ್ಯಕ್ತಿ, ಠಾಣೆ ಮೆಟ್ಟಿಲೇರಿದ್ದರು. ಸಂಧಾನದ ಮೂಲಕ ಹಣ ವಾಪಸು ಕೊಡಿಸುವುದಾಗಿ ಪಿಎಸ್‌ಐ ರುಮಾನ್ ಪಾಷಾ ಹಾಗೂ ಸಿಬ್ಬಂದಿ ಹೇಳಿದ್ದರು. ಅದಕ್ಕಾಗಿ ಕಮಿಷನ್ ನೀಡುವಂತೆ ಬೇಡಿಕೆ ಇರಿಸಿದ್ದರು’ ಎಂದು ಮೂಲಗಳು ತಿಳಿಸಿವೆ.

‘ಕೊಂಡಪ್ಪ ಅವರನ್ನು ಅಕ್ರಮವಾಗಿ ಬಂಧಿಸಿದ್ದ ಪಿಎಸ್‌ಐ, 36 ಗಂಟೆ ಠಾಣೆಯಲ್ಲಿ ಕೂರಿಸಿದ್ದರು. ಪ್ರಕರಣ ದಾಖಲಿಸುವ ಬೆದರಿಕೆಯೊಡ್ಡಿ ಕೊಂಡಪ್ಪ ಅವರಿಂದ
₹ 15 ಲಕ್ಷವನ್ನು ವ್ಯಕ್ತಿಗೆ ವಾಪಸು ಕೊಡಿಸಿದ್ದರು. ಅದರಲ್ಲಿ ಪಿಎಸ್ಐ ಹಾಗೂ ಇತರರು ಕಮಿಷನ್ ಪಡೆದಿರುವ ಆರೋಪವಿದೆ.

ಈ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.