ಬೆಂಗಳೂರು: ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿರುವ ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರ ಮೂರು ಮೊಬೈಲ್ಗಳು ಕಳುವಾಗಿವೆ. ಈ ಸಂಬಂಧ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಸ್ವಾಮೀಜಿಯವರ ಆಪ್ತ ಸಹಾಯಕ ವಿಶ್ವನಾಥ್ ಅವರು ಮೊಬೈಲ್ ಕಳ್ಳತನದ ಬಗ್ಗೆ ದೂರು ನೀಡಿದ್ದಾರೆ. ಎಫ್ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಸ್ವಾಮೀಜಿಯವರು ಜ. 14ರಿಂದ ಪ್ರತಿಭಟನೆ ಆರಂಭಿಸಿದ್ದಾರೆ. ಸ್ವಾಮೀಜಿ ಬಳಿ ಸ್ಯಾಮ್ಸಂಗ್ ಕಂಪನಿಯ ಮೂರು ಮೊಬೈಲ್ಗಳಿದ್ದವು. ಅವುಗಳನ್ನು ಆಗಾಗ ವಿಶ್ವನಾಥ್ ಬಳಿ ಇಟ್ಟುಕೊಳ್ಳಲು ಕೊಡುತ್ತಿದ್ದರು.’
‘ಜ. 30ರಂದು ಸಂಜೆ ಉದ್ಯಾನದಲ್ಲಿ ವಾಯುವಿಹಾರಕ್ಕೆ ಹೋಗಿದ್ದ ಸ್ವಾಮೀಜಿ, ಮೂರು ಮೊಬೈಲ್ಗಳನ್ನು ವಿಶ್ವನಾಥ್ ಬಳಿ ನೀಡಿದ್ದರು. ಅದೇ ಮೊಬೈಲ್ಗಳನ್ನು ವಿಶ್ವನಾಥ್, ಕಾರಿನಲ್ಲಿ ಇಟ್ಟಿದ್ದು, ಬಾಗಿಲು ಲಾಕ್ ಮಾಡುವುದನ್ನು ಮರೆತಿದ್ದರು. ಇದನ್ನು ಗಮನಿಸಿ ₹ 30 ಸಾವಿರ ಮೌಲ್ಯದ ಮೊಬೈಲ್ಗಳನ್ನು ಕಳುವು ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.