ADVERTISEMENT

ಟಿನ್ ಫ್ಯಾಕ್ಟರಿ ಜಂಕ್ಷನ್: ನೀರು ಕಟ್ಟಿಕೊಳ್ಳುವ ಸಮಸ್ಯೆಯಿಂದ ಮುಕ್ತಿ

ಕೊಳವೆಗಳಲ್ಲಿ ತುಂಬಿದ್ದ ಹೂಳು ತೆರವು

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 15:09 IST
Last Updated 23 ಜುಲೈ 2020, 15:09 IST
ಕೆ.ಆರ್‌.ಪುರದ ಟಿನ್ ಫ್ಯಾಕ್ಟರಿ ಬಳಿಕ ಒಳಚರಂಡಿ ಕಟ್ಟಿಕೊಂಡು ಜಲಾವೃತವಾಗುತ್ತಿದ್ದ ಪ್ರದೇಶದಲ್ಲಿ ನಡೆಸಿದ ಕಾಮಗಾರಿಯನ್ನು ಮೇಯರ್‌ ಎಂ.ಗೌತಮ್‌ ಕುಮಾರ್‌ ಗುರುವಾರ ಪರಿಶೀಲಿಸಿದರು. ಮಹದೇವಪುರ ವಲಯದ ಮುಖ್ಯ ಎಂಜಿನಿಯರ್‌ ಪರಮೇಶ್ವರ್‌ ಇದ್ದಾರೆ.
ಕೆ.ಆರ್‌.ಪುರದ ಟಿನ್ ಫ್ಯಾಕ್ಟರಿ ಬಳಿಕ ಒಳಚರಂಡಿ ಕಟ್ಟಿಕೊಂಡು ಜಲಾವೃತವಾಗುತ್ತಿದ್ದ ಪ್ರದೇಶದಲ್ಲಿ ನಡೆಸಿದ ಕಾಮಗಾರಿಯನ್ನು ಮೇಯರ್‌ ಎಂ.ಗೌತಮ್‌ ಕುಮಾರ್‌ ಗುರುವಾರ ಪರಿಶೀಲಿಸಿದರು. ಮಹದೇವಪುರ ವಲಯದ ಮುಖ್ಯ ಎಂಜಿನಿಯರ್‌ ಪರಮೇಶ್ವರ್‌ ಇದ್ದಾರೆ.   

ಬೆಂಗಳೂರು: ಕೆ.ಆರ್.ಪುರ ಬಳಿಯ ಪೈ ಬಡಾವಣೆ ಮತ್ತು ಟಿನ್‌ಫ್ಯಾಕ್ಟರಿ ಜಂಕ್ಷನ್ ಬಳಿಯ ಮೇಲ್ಸೇತುವೆಯ ಕೆಳಭಾಗದಲ್ಲಿ ನೀರು ಕಟ್ಟಿಕೊಳ್ಳುವ ಸಮಸ್ಯೆಗೆ ಕೊನೆಗೂ ಮುಕ್ತಿ ಸಿಕ್ಕಿದೆ.

ಇಲ್ಲಿನ 80 ಮೀಟರ್ ಉದ್ದದ ಮೂರು ಕೊಳವೆಗಳಲ್ಲಿ ಹೂಳು ತುಂಬಿಕೊಂಡಿದ್ದ ಪರಿಣಾಮ ಪ್ರತಿ ವರ್ಷವೂ ಮಳೆಗಾಲದಲ್ಲಿ ಈ ಪ್ರದೇಶ ಜಲಾವೃತಗೊಳ್ಳುತ್ತಿತ್ತು. ಸುಮಾರು 8 ವರ್ಷಗಳಿಂದಲೂ ಈ ಸಮಸ್ಯೆ ಇತ್ತು. ತಿಂಗಳ ಹಿಂದೆ ಸುರಿದ ಮಳೆಗೆ ಈ ಪ್ರದೇಶದಲ್ಲಿ ನೀರು ತುಂಬಿ ಸುಮಾರು ನಾಲ್ಕೈದು ಅಡಿಗಳಷ್ಟು ನೀರು ರಸ್ತೆ ಮೇಲೆ ನಿಂತಿತ್ತು. ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಈ ಸಮಸ್ಯೆಯನ್ನು ಶೀಘ್ರವೇ ಸರಿಪಡಿಸುವಂತೆ ಮೇಯರ್‌ ಎಂ.ಗೌತಮ್‌ ಕುಮಾರ್‌ ಸೂಚಿಸಿದ್ದರು.

ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಸಲುವಾಗಿ ಮೂರೂ ಕೊಳವೆಗಳಲ್ಲಿನ ಹೂಳನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ. ಬಳಿಕ ಯಾವುದೇ ಅಡೆ ತಡೆ ಇಲ್ಲದೆಯೇ ನೀರು ಸರಾಗವಾಗಿ ಹರಿಯುತ್ತಿದೆ. ಈ ಪ್ರದೇಶವು ಈ ಬಾರಿ ಮಳೆಗೆ ಜಲಾವೃತವಾಗಿಲ್ಲ.

ADVERTISEMENT

ಈ ಸ್ಥಳಕ್ಕೆ ಮೇಯರ್‌ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯರನ್ನು ಅನೇಕ ವರ್ಷಗಳಿಂದ ಕಾಡುತ್ತಿದ್ದ ಸಮಸ್ಯೆ ಬಗೆಹರಿಸಿದ್ದಕ್ಕೆ ಮುಖ್ಯ ಎಂಜಿನಿಯರ್‌ ಪರಮೇಶ್ವರ್‌ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

‘ಮಳೆಗಾಲದಲ್ಲಿ ಯಾವುದೇ ಸಮಸ್ಯೆ ಆಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಒಳಹರಿವು ಕಾಲುವೆಗಳಲ್ಲಿ ತುಂಬಿಕೊಳ್ಳುವ ಹೂಳನ್ನು ಆಗಿಂದಾಗ್ಗೆ ತೆರವುಗೊಳಿಸುತ್ತಿರಬೇಕು. ನೀರು ಕಟ್ಟಿಕೊಳ್ಳುವ ಇತರ ಪ್ರದೇಶಗಳಲ್ಲಿಯೂ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸಲು ಕ್ರಮ ಕೈಕೊಳ್ಳಬೇಕು’ ಎಂದು ಮೇಯರ್‌ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.