ಕ್ಯಾನ್ಸರ್
(ಐಸ್ಟೋಕ್ ಚಿತ್ರ)
ಬೆಂಗಳೂರು: ಕ್ಯಾನ್ಸರ್ ಸಂಬಂಧಿತ ಕಾಯಿಲೆಗಳ ಪೈಕಿ ಶೇ 30ರಷ್ಟು ಶಿರ ಮತ್ತು ಕುತ್ತಿಗೆ ಕ್ಯಾನ್ಸರ್ಗಳಾಗಿವೆ. ಇದರಲ್ಲಿ ಶೇ 90ರಷ್ಟು ಕ್ಯಾನ್ಸರ್ಗೆ ತಂಬಾಕು ಕಾರಣ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನಿರ್ದೇಶಕ ಡಾ.ಟಿ. ನವೀನ್ ತಿಳಿಸಿದರು.
ಸಂಸ್ಥೆಯ ಶಿರ ಮತ್ತು ಕುತ್ತಿಗೆ ಗಂಥಿ ಶಾಸ್ತ್ರ ವಿಭಾಗವು ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಶಿರ ಮತ್ತು ಕುತ್ತಿಗೆ ಕ್ಯಾನ್ಸರ್ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಸ್ಕ್ರೀನಿಂಗ್ ಮೂಲಕ ಶಿರ ಮತ್ತು ಕುತ್ತಿಗೆ ಕ್ಯಾನ್ಸರ್ಗಳನ್ನು ಆರಂಭಿಕ ಹಂತಗಳಲ್ಲಿ ಪತ್ತೆ ಮಾಡಲಾಗುತ್ತದೆ. ಬಾಯಿಯಲ್ಲಿ ವಾಸಿಯಾಗದ ಹುಣ್ಣು, ಧ್ವನಿಯಲ್ಲಿ ಕರ್ಕಶ, ಮುಖ ಮತ್ತು ಕುತ್ತಿಗೆಯಲ್ಲಿ ಗಡ್ಡೆ ಅಥವಾ ಊತ ಇರುವುದು ಕಾಯಿಲೆಯ ಸಂಕೇತವಾಗಿದೆ’ ಎಂದು ಹೇಳಿದರು.
ತಂಬಾಕು ಸೇವನೆಯಿಂದ ದೂರ ಇರುವ ಮೂಲಕ ಶಿರ ಮತ್ತು ಕುತ್ತಿಗೆ ಕ್ಯಾನ್ಸರ್ನಿಂದ ಮುಕ್ತವಾಗಬಹುದು. ಈ ಬಗ್ಗೆ ಕಾರ್ಯಾಗಾರ ಹಾಗೂ ಜಾಗೃತಿ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದರು.
ಸಂಸ್ಥೆಯ ಶಿರ ಮತ್ತು ಕುತ್ತಿಗೆ ಗಂಥಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಪುರುಷೋತ್ತಮ್ ಚವ್ಹಾಣ್ ಮಾತನಾಡಿ, ‘ಶಿರ ಮತ್ತು ಕುತ್ತಿಗೆ ಕ್ಯಾನ್ಸರ್ ಸಂಬಂಧಿತ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕು. ಎಕ್ಸ್ರೇ, ಸಿಟಿ ಸ್ಕ್ಯಾನ್, ಎಂಐಆರ್–ಪಿಇಟಿ ಸ್ಕ್ಯಾನ್, ರಕ್ತದ ಪರೀಕ್ಷೆಗಳ ಮೂಲಕ ಕಾಯಿಲೆಯನ್ನು ಪತ್ತೆಹಚ್ಚಬಹುದು’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.