
ಬೆಂಗಳೂರು: ರೈತರಿಂದ ಬಾಡಿಗೆಯ ನೆಪದಲ್ಲಿ ಪಡೆದುಕೊಂಡಿದ್ದ ಟ್ರ್ಯಾಕ್ಟರ್ ಮಾರಾಟ ಮಾಡಿ, ವಂಚಿಸುತ್ತಿದ್ದ ಆರೋಪಿಯನ್ನು ಈಶಾನ್ಯ ವಿಭಾಗದ ಚಿಕ್ಕಜಾಲ ಠಾಣೆಯ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ದಿಬ್ಬೂರುಹಳ್ಳಿ ನಿವಾಸಿ ಪಿ.ದೇವರಾಜ್ (35) ಬಂಧಿತ. ಆರೋಪಿಯಿಂದ ₹70 ಲಕ್ಷ ಮೌಲ್ಯದ 17 ಟ್ರ್ಯಾಕ್ಟರ್ ಹಾಗೂ ಟ್ರಾಲಿ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿ ದೇವರಾಜ್ ಅವರಿಗೆ ದಿಬ್ಬೂರುಹಳ್ಳಿಯ ರೈತರು ತಮ್ಮ ಟ್ರ್ಯಾಕ್ಟರ್ ಹಾಗೂ ಟ್ರಾಲಿಗಳನ್ನು ಬಾಡಿಗೆಗೆ ನೀಡುತ್ತಿದ್ದರು. ದೇವರಾಜ್ ಅವರಿಂದ ರೈತರು ಹಣ ಪಡೆದುಕೊಳ್ಳುತ್ತಿದ್ದರು. ದೇವರಾಜ್ ಅವರು ರೈತರಿಂದ ಪಡೆದುಕೊಂಡ ಟ್ರ್ಯಾಕ್ಟರ್ಗಳನ್ನು ಬೇರೆ ಕಡೆ ಹೆಚ್ಚಿನ ಬಾಡಿಗೆಗೆ ಬಿಡುತ್ತಿದ್ದರು. ಆದರೆ, ಐದು ತಿಂಗಳಿಂದ ಆರೋಪಿ, ರೈತರಿಗೆ ಹಣ ನೀಡಿರಲಿಲ್ಲ. ಅನುಮಾನಗೊಂಡ ರೈತರೊಬ್ಬರು ದೂರು ನೀಡಿದ್ದರು. ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತೆಯ ಕಲಂ 318 (4) ಹಾಗೂ 316(2)ರ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಯಿತು ಎಂದು ಪೊಲೀಸರು ಹೇಳಿದರು.
‘ರೈತರಿಂದ ಪಡೆದುಕೊಂಡಿದ್ದ ಟ್ರ್ಯಾಕ್ಟರ್ ಹಾಗೂ ಟ್ರಾಲಿಗಳನ್ನು ದೇವರಾಜು ಅವರು ಮಾರಾಟ ಮಾಡಿದ್ದು ತನಿಖೆ ವೇಳೆ ಕಂಡುಬಂತು. ಬಳಿಕ ಅವರನ್ನು ಬಂಧಿಸಲಾಯಿತು’ ಎಂದು ಮೂಲಗಳು ಹೇಳಿವೆ.
ಪ್ರಕರಣದ ತನಿಖೆಗೆ ಚಿಕ್ಕಜಾಲ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಎನ್.ಆನಂದ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು ಎಂದು ಈಶಾನ್ಯ ವಿಭಾಗದ ಡಿಸಿಪಿ ವಿ.ಜೆ.ಸಜೀತ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.