
ಕಡತ
(ಸಾಂದರ್ಭಿಕ ಚಿತ್ರ)
ಬೆಂಗಳೂರು: ಲಿಂಗತ್ವ ಅಲ್ಪಸಂಖ್ಯಾತರ ಉತ್ಸವ ‘ಒಂದೆಡೆ ರಂಗೋತ್ಸವ’ವನ್ನು ಫೆ.21 ಮತ್ತು 22ರಂದು ನ್ಯಾಷನಲ್ ಗ್ಯಾಲರಿ ಆಫ್ ಮಾರ್ಡನ್ ಆರ್ಟ್ನಲ್ಲಿ ಹಮ್ಮಿಕೊಳ್ಳಲಾಗಿದೆ.
ಕೇಂದ್ರ ಸಂಸ್ಕೃತಿ ಸಚಿವಾಲಯದ ಸಹಯೋಗದಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆ, ಭಾರತೀಯ ಸಾಮಾಜಿಕ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ನಾಟಕ ಅಕಾಡೆಮಿ ಸಹಕಾರದಲ್ಲಿ ‘ಒಂದೆಡೆ’ ಸಂಘಟನೆ ಈ ಉತ್ಸವವನ್ನು ಹಮ್ಮಿಕೊಂಡಿದೆ.
ಫೆ.21ರಂದು ಬೆಳಿಗ್ಗೆ 11.20ಕ್ಕೆ ಕಾರ್ಯಕ್ರಮ ಉದ್ಘಾಟನೆಯಾಗಲಿದೆ. ರಂಗಪಯಣ ತಂಡವು ‘ಅಕ್ಕೈ–ಕರುಣೆಗೊಂದು ಸವಾಲು’ ರಂಗ ಪ್ರಸ್ತುತಿ ನೀಡಲಿದೆ. ವೈಷ್ಣವಿ ನಾಟ್ಯಶಾಲಾ ತಂಡದ ಸದಸ್ಯರಿಂದ ಭರತನಾಟ್ಯ ಪ್ರದರ್ಶನಗೊಳ್ಳಲಿದೆ. ಕವಿಗೋಷ್ಠಿಯಲ್ಲಿ ಸಮುದಾಯದ ಸದಸ್ಯರು ಕವನ ವಾಚಿಸಲಿದ್ದಾರೆ. ಸಾಧನ ಮಹಿಳಾ ಸಂಘವು ‘ಹಸಿವು ಕನಸು’ ರಂಗ ಪ್ರಸ್ತುತಿ ನೀಡಲಿದೆ. ಒಂದೆಡೆ ರಂಗ ತಂಡವು ‘ಕರಗತಂ’ ಪ್ರಸ್ತುತಪಡಿಸಲಿದೆ. ಸಮುದಾಯದ ಸದಸ್ಯರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲಿದ್ದಾರೆ.
ಫೆ.22ರಂದು ಒಂದೆಡೆ ರಂಗತಂಡ ಮತ್ತು ಉತ್ತರ ಕರ್ನಾಟಕ ಜೋಗಪ್ಪ ಸಂಘದ ಸದಸ್ಯರು ಚೌಡಕಿ ಪದ ಹಾಡಲಿದ್ದಾರೆ. ಹೆಣ್ಣೊಬ್ಬಳು ಗಂಡಾಗಿ ಪರಿವರ್ತನೆ ಆದಾಗ ಉಂಟಾದ ಧ್ವನಿ ಬದಲಾವಣೆ, ನೋವು, ಪ್ರೇಮಿ, ಸಹಪ್ರಯಾಣ ಕಟ್ಟಿಕೊಡುವ ‘ಎ ಟು ಇ’ ಏಕವ್ಯಕ್ತಿ ಪ್ರದರ್ಶನವನ್ನು ರೂಮಿ ಹರೀಶ್ ನೀಡಲಿದ್ದಾರೆ. ‘ಪರಿವರ್ತಿತ ಲಿಂಗತ್ವ’ ಸಮುದಾಯವು ‘ತಲ್ಕಿ’ ನಾಟಕ ಪ್ರದರ್ಶನ ನೀಡಲಿದೆ. ಒಂದೆಡೆ ತಂಡದಿಂದ ಸಾಂಸ್ಕೃತಿಕ ಹಾಡುಗಳ ಗಾಯನ ಇರಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.