ಬೆಂಗಳೂರು: ವಿಶ್ವ ಕ್ಷಯ ರೋಗ ದಿನದ ಪ್ರಯುಕ್ತ ಆರೋಗ್ಯ ಇಲಾಖೆಯು ಇಲ್ಲಿನ ಸರ್.ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ‘ವಯಸ್ಕರ ಬಿಸಿಜಿ ಲಸಿಕಾಕರಣ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
60 ವರ್ಷಗಳು ಮೇಲ್ಪಟ್ಟವರು, ಕಳೆದ ಐದು ವರ್ಷಗಳಲ್ಲಿ ಕ್ಷಯ ರೋಗಕ್ಕೆ ಒಳಗಾಗಿ ಚಿಕಿತ್ಸೆ ಪಡೆದವರು, ಸಕ್ರಿಯ ಕ್ಷಯ ರೋಗಿಗಳ ನಿಕಟ ಸಂಪರ್ಕಿತರು, ದೇಹ ಗಾತ್ರದ ಸೂಚ್ಯಂಕ 18ಕ್ಕಿಂತ ಕಡಿಮೆ ಇರುವವರು, ಮಧುಮೇಹಿಗಳು ಹಾಗೂ ಧೂಮಪಾನಿಗಳು ಈ ಲಸಿಕೆಯ ಫಲಾನುಭವಿಗಳಾಗಿದ್ದಾರೆ.
ಬಳಿಕ ಮಾತನಾಡಿದ ಸಚಿವರು, ‘ರಾಜ್ಯದ 16 ಜಿಲ್ಲೆಗಳಲ್ಲಿ ಬಿಸಿಜಿ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕ್ಷಯ ರೋಗ ಬರದಂತೆ ತಡೆಯುವಲ್ಲಿ ಈ ಕಾರ್ಯಕ್ರಮ ಮಹತ್ವದ ಪಾತ್ರ ವಹಿಸಲಿದೆ. ಈಗಾಗಲೇ ರಾಜ್ಯದಲ್ಲಿ 1,060 ಗ್ರಾಮ ಪಂಚಾಯಿತಿಗಳನ್ನು ಕ್ಷಯ ರೋಗ ಮುಕ್ತ ಗ್ರಾಮ ಪಂಚಾಯಿತಿಗಳನ್ನಾಗಿ ರೂಪಿಸಲಾಗಿದೆ. ಅಲ್ಲದೆ, ಕ್ಷಯ ನಿರ್ಮೂಲನಾ ಕಾರ್ಯಕ್ರಮದ ಅಡಿಯಲ್ಲಿ ಕ್ಷಯ ರೋಗಿಗಳಿಗೆ 98,721 ಪೌಷ್ಟಿಕ ಆಹಾರದ ಕಿಟ್ಗಳನ್ನ ವಿತರಿಸಲಾಗಿದೆ. ಸಾರ್ವಜನಿಕರು ಕ್ಷಯ ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸಲು ಬಿಸಿಜಿ ಲಸಿಕಾ ಕಾರ್ಯಕ್ರಮದ ಲಾಭ ಪಡೆಯಬೇಕು’ ಎಂದು ಹೇಳಿದರು.
‘ರಾಜ್ಯದಲ್ಲಿ 2024ರಲ್ಲಿ 20 ಲಕ್ಷಕ್ಕೂ ಅಧಿಕ ಸಂಭಾವ್ಯ ಕ್ಷಯ ರೋಗಿಗಳ ಕಫ ಪರೀಕ್ಷೆಗಳನ್ನು ಮಾಡಲಾಗಿದೆ. ಒಟ್ಟು 77,987 ಕ್ಷಯ ಪ್ರಕರಣಗಳು ದೃಢಪಟ್ಟಿವೆ. ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಮುಖ ಆಗುತ್ತಿದೆ. ದೃಢ ಪ್ರಕರಣಗಳಲ್ಲಿ ಶೇ 4.5 ರಷ್ಟು ಪ್ರಕರಣಗಳು ಔಷಧ ನಿರೋಧಕ ಕ್ಷಯ ರೋಗಿಗಳಾಗಿರುತ್ತಾರೆ’ ಎಂದರು.
‘ಕ್ಷಯ ರೋಗಿಗಳಿಗೆ ಕನಿಷ್ಠ 6 ತಿಂಗಳ ಅವಧಿಯ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಕ್ಷಯ ರೋಗದಿಂದ ಉಂಟಾಗುವ ಮರಣ ದರವನ್ನು ಶೇ 8ರಿಂದ ಶೇ 6ಕ್ಕೆ ಇಳಿಸಲಾಗಿದೆ’ ಎಂದು ಹೇಳಿದರು.
ಇದೇ ವೇಳೆ ಇಲಾಖೆ ನಿರ್ದೇಶಕಿ ತ್ರಿವೇಣಿ ಸೇರಿದಂತೆ ಕ್ಷಯ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಸಹ ಬಿಸಿಜಿ ಲಸಿಕೆ ಪಡೆದು ಜಾಗೃತಿ ಮೂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.