ADVERTISEMENT

ಅಪಘಾತ: ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 26 ಜನವರಿ 2022, 16:52 IST
Last Updated 26 ಜನವರಿ 2022, 16:52 IST

ಬೆಂಗಳೂರು: ಬೈಕ್‌ ಹಾಗೂ ಟಾಟಾ ಏಸ್‌ ಡಿಕ್ಕಿಯಾಗಿದ್ದರಿಂದ ಬೈಕ್‌ನಲ್ಲಿದ್ದ ಯುವಕ ಮೃತಪಟ್ಟಿದ್ದಾನೆ. ವೈಟ್‌ಫೀಲ್ಡ್‌ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಅಮಿತ್‌ (24) ಮೃತ ಯುವಕ. ಈತ ಅಸ್ಸಾಂ ಮೂಲದವನು’ ಎಂದು‍ಪೊಲೀಸರು ಹೇಳಿದ್ದಾರೆ.

‘ಅಮಿತ್‌ ಹಾಗೂ ಆತನ ಇಬ್ಬರು ಸ್ನೇಹಿತರು ವರ್ತೂರಿನಲ್ಲಿ ವಾಸವಿದ್ದರು. ಕೂಲಿ ಕೆಲಸ ಮಾಡುತ್ತಿದ್ದ ಇವರು ಮಂಗಳವಾರ ಒಂದೇ ಬೈಕ್‌ನಲ್ಲಿ ಹೋಗುತ್ತಿದ್ದರು. ರಾತ್ರಿ 12 ಗಂಟೆ ಸುಮಾರಿಗೆ ವರ್ತೂರು ಮುಖ್ಯರಸ್ತೆಯಲ್ಲಿ ವೇಗವಾಗಿ ಬಂದ ಟಾಟಾ ಏಸ್‌ ಡಿಕ್ಕಿ ಹೊಡೆದಿದ್ದರಿಂದ ಬೈಕ್‌ನಲ್ಲಿದ್ದ ಮೂವರು ಕೆಳಕ್ಕೆ ಉರುಳಿದ್ದಾರೆ. ಬೈಕ್‌ ಸವಾರ ಹಾಗೂ ಹಿಂಬದಿ ಸವಾರನಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ. ಮಧ್ಯದಲ್ಲಿ ಕುಳಿತಿದ್ದ ಅಮಿತ್‌ಗೆ ಗಂಭೀರ ಗಾಯವಾಗಿತ್ತು. ಆತ ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಬೆಳಿಗ್ಗೆ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಬುಲೆಟ್‌ನಿಂದ ಬಿದ್ದು ಸವಾರ ಸಾವು

ಬೆಂಗಳೂರು: ಬುಲೆಟ್‌ ಬೈಕ್‌ವೊಂದು ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿದ್ದರಿಂದ ಚಾಲಕ ಮೃತಪಟ್ಟಿದ್ದಾನೆ. ಯಲಹಂಕ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

‘ಸಂದೀಪ್‌ (26) ಮೃತ ಯುವಕ. ಈತ ಸಂಭ್ರಮ್‌ ಕಾಲೇಜು ಸಮೀಪ ವಾಸವಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಸಂದೀಪ್‌, ವಿದ್ಯಾರಣ್ಯಪುರದ ಸಪ್ತಗಿರಿ ಕಾಲೇಜಿನ 4ನೇ ಕ್ರಾಸ್‌ ಬಳಿ ಬುಲೆಟ್‌ನಲ್ಲಿ ಸಾಗುತ್ತಿದ್ದ. ತಿರುವು ಪಡೆಯುವ ವೇಳೆ ಬೈಕ್‌ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿತ್ತು. ಸಂದೀಪ್‌ ಹೆಲ್ಮೆಟ್‌ ಧರಿಸಿರಲಿಲ್ಲ. ಹೀಗಾಗಿ ಆತನ ತಲೆಗೆ ಬಲವಾದ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.