ADVERTISEMENT

ರೌಡಿಶೀಟರ್ ಸೇರಿ ಇಬ್ಬರಿಗೆ ಗುಂಡೇಟು

ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2019, 19:10 IST
Last Updated 6 ಅಕ್ಟೋಬರ್ 2019, 19:10 IST
ವಿಜಯ್ ಅಲಿಯಾಸ್ ದಡಿಯಾ ವಿಜಿ ಹಾಗೂ ಹನುಮಂತ ಅಲಿಯಾಸ್ ಮೋರಿ ಹನಿ
ವಿಜಯ್ ಅಲಿಯಾಸ್ ದಡಿಯಾ ವಿಜಿ ಹಾಗೂ ಹನುಮಂತ ಅಲಿಯಾಸ್ ಮೋರಿ ಹನಿ   

ಬೆಂಗಳೂರು: ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ರೌಡಿಶೀಟರ್ ಮತ್ತು ಹಳೆ ಆರೋಪಿಯನ್ನು ಜಾಲಹಳ್ಳಿ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

ನಂದಿನಿ ಲೇಔಟ್ ಠಾಣೆಯ ರೌಡಿಶೀಟರ್ ವಿಜಯ್ ಅಲಿಯಾಸ್ ದಡಿಯಾ ವಿಜಿ (24) ಮತ್ತು ಅದೇ ಠಾಣೆಯ ಹಳೆ ಆರೋಪಿ ಹನುಮಂತ ಅಲಿಯಾಸ್ ಮೋರಿ ಹನಿ (24) ಗುಂಡೇಟು ತಿಂದವರು. ಚಿಕಿತ್ಸೆಗಾಗಿ ಇಬ್ಬರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.‌

ಮನೆಗಳಿಗೆ ನುಗ್ಗಿ ಕಳವು, ಸರ ಕಳವು, ದ್ವಿಚಕ್ರ ವಾಹನ ಕಳವು ಸೇರಿದಂತೆ ಅಪರಾಧ ಚಟುವಟಿಕೆಗಳು ಇತ್ತೀಚೆಗೆ ಹೆಚ್ಚುತ್ತಿದ್ದ ಹಿನ್ನೆಲೆಯಲ್ಲಿ ಜಾಲಹಳ್ಳಿ ಪೊಲೀಸರು, ಆರೋಪಿಗಳ ಶೋಧಕಾರ್ಯದಲ್ಲಿ ತೊಡಗಿದ್ದರು. ಕಾರ್ಯಾಚರಣೆ ಸಂದರ್ಭದಲ್ಲಿ ವಿಜಯ್ ಮತ್ತು ಹನುಮಂತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ, ಇಬ್ಬರೂ ಹಲವು ‌ಅಪರಾಧ ಚಟುವಟಿಕೆಯಲ್ಲಿ ತೊಡಗಿರುವುದು ಗೊತ್ತಾಗಿದೆ.

ADVERTISEMENT

ಕಳವು ಮಾಡಿದ ಮಾಲುಗಳನ್ನು ಅಡಗಿಸಿಟ್ಟಿರುವ ಸ್ಥಳ ತೋರಿಸುವುದಾಗಿ ತಿಳಿಸಿದ್ದರಿಂದ ಭಾನುವಾರ ನಸುಕಿನ ಆರು ಗಂಟೆ ಸುಮಾರಿಗೆ ನಂದಿನಿ ಲೇಔಟ್ ಠಾಣಾ ವ್ಯಾಪ್ತಿಯ ಕೂಲಿನಗರದ ಸೇತುವೆ ಹತ್ತಿರಕ್ಕೆ ಇನ್‍ಸ್ಪೆಕ್ಟರ್ ಬಿ.ಎಸ್‌. ಯಶವಂತ್, ಪಿಎಸ್‍ಐ ಲೇಪಾಕ್ಷ ಮೂರ್ತಿ ಮತ್ತು ಸಿಬ್ಬಂದಿ ಅವರಿಬ್ಬರನ್ನೂ ಕರೆದೊಯ್ದಿ ದ್ದಾರೆ. ಸ್ಥಳಕ್ಕೆ ತಲುಪುತ್ತಿದ್ದಂತೆ ಬೆಂಗಾ ವಲಿಗಾಗಿ ಜೊತೆಗಿದ್ದ ಪೊಲೀಸ್ ಹೆಡ್‌ ಕಾನ್‌ಸ್ಟೆಬಲ್‌ ಶ್ರೀನಿವಾಸಮೂರ್ತಿ ಮತ್ತು ನರೇಶ್ ಅವರನ್ನು ತಳ್ಳಿದ ಆರೋಪಿಗಳು, ಕಲ್ಲುಗಳಿಂದ ಹಲ್ಲೆ ಮಾಡಿದ್ದಾರೆ.

ತಕ್ಷಣ ಯಶವಂತ್ ಮತ್ತು ಲೇಪಾಕ್ಷಿ ಮೂರ್ತಿ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಆರೋಪಿಗಳಿಗೆ ಸೂಚಿಸಿದ್ದಾರೆ. ಆದರೆ, ಆ ಎಚ್ಚರಿಕೆಯನ್ನೂ ಲೆಕ್ಕಿಸದೆ ಆರೋಪಿಗಳು ಪೊಲೀಸರ ಮೇಲೆ ಕಲ್ಲುಗಳಿಂದ ಹಲ್ಲೆ ನಡೆಸಿದಾಗ, ಆತ್ಮರಕ್ಷಣೆಗಾಗಿ ಇನ್‍ಸ್ಪೆಕ್ಟರ್ ಮತ್ತು ಪಿಎಸ್‍ಐ ‌ಗುಂಡು‌ ಹಾರಿಸಿದ್ದಾರೆ.

ವಿಜಯ್‍ನ ಎಡಗಾಲಿಗೆ ಹಾಗೂ ಹನುಮಂತನ ಬಲಗಾಲಿಗೆ ಗುಂಡು ತಗುಲಿದೆ. ಕುಸಿದು ಬಿದ್ದ ಇಬ್ಬರಿಗೂ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಇಬ್ಬರು ಆರೋಪಿಗಳ ಮೇಲೆ ಬಸವೇಶ್ವರನಗರ, ನಂದಿನಿ ಲೇಔಟ್, ರಾಜಗೋಪಾಲನಗರ, ಮಹಾಲಕ್ಷ್ಮಿ ಲೇಔಟ್, ಪೀಣ್ಯ, ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ 15ಕ್ಕೂ ಹೆಚ್ಚು ದರೋಡೆ ಸಂಚು, ಸರ ಕಳವು ದರೋಡೆ, ಮನೆಗಳಿಗೆ ನುಗ್ಗಿ ಕಳವು ಪ್ರಕರಣಗಳು ದಾಖಲಾಗಿವೆ. ಈ ಇಬ್ಬರು ಆರೋಪಿಗಳು ಸೇರಿಕೊಂಡು ವಾರದ ಹಿಂದೆ ರಾಜ್‍ಕುಮಾರ್ ಸಮಾಧಿ ಹತ್ತಿರ ನಾಗರತ್ನ ಎಂಬುವವರ ಚಿನ್ನದ ಸರ ಕಳವು ಮಾಡಿರುವುದು ವಿಚಾರಣೆಯಿಂದ ತಿಳಿದುಬಂದಿದೆ.

ಆರೋಪಿಗಳು ಜೈಲಿನಲ್ಲಿರುವ ಅಶೋಕ್ ಅಲಿಯಾಸ್ ಸಂಪತ್ ಅಲಿಯಾಸ್ ಮತ್ತಿ ಎಂಬಾತನ ಸಹಚರರಾಗಿದ್ದು, ಆತನಿಗಾಗಿ ದರೋಡೆ, ಕಳವು ಕೃತ್ಯಗಳಲ್ಲಿ ಭಾಗಿಯಾಗಿರುವುದು ವಿಚಾರಣೆಯಿಂದ ಗೊತ್ತಾಗಿದೆ. ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಅಶೋಕ್‌ನ ಮೇಲೆ ಸುಮಾರು 20 ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.