
ವಿಧಾನಸೌಧ
ದಾಬಸ್ ಪೇಟೆ: ನೆಲಮಂಗಲ ತಾಲ್ಲೂಕಿನ ತ್ಯಾಮಗೊಂಡ್ಲು ಗ್ರಾಮ ಪಂಚಾಯಿತಿಯು ಪಟ್ಟಣ ಪಂಚಾಯಿತಿಯಾಗಿ ಪರಿವರ್ತನೆಯಾಗಿದೆ.
2020ರ ಪಂಚಾಯಿತಿ ಚುನಾವಣೆಯಲ್ಲಿ ಗ್ರಾಮ ಪಂಚಾಯಿತಿಯನ್ನು ಮೇಲ್ದರ್ಜೆಗೆರಿಸಬೇಕು ಎಂದು ಆಗ್ರಹಿಸಿ ನಾಮಪತ್ರ ಸಲ್ಲಿಸದೇ ಚುನಾವಣೆಯನ್ನು ಬಹಿಷ್ಕರಿಸಿದ್ದರು. 2021ರಲ್ಲಿ ಮತ್ತೆ ಚುನಾವಣೆ ಘೋಷಣೆಯಾಯಿತು. ಆಗ ಅನಿವಾರ್ಯವಾಗಿ ಆಕಾಂಕ್ಷಿಗಳು ಸ್ಪರ್ಧೆ ಮಾಡಿ, ಚುನಾವಣೆ ನಡೆದಿತ್ತು.
ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಮುನ್ನ ತ್ಯಾಮಗೊಂಡ್ಲು ಪಟ್ಟಣ ಪಂಚಾಯಿತಿ ಆಗಿತ್ತು. ಕಾರಾಣಾಂತರಗಳಿಂದ ಮುಂದೆ ಗ್ರಾಮ ಪಂಚಾಯಿತಿಯಾಯಿತು. 13 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಪಟ್ಟಣವನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಇಲ್ಲಿನ ಜನರು ಹಾಗೂ ಹಲವು ಸಂಘಟನೆಗಳವರು ಸರ್ಕಾರಕ್ಕೆ ಮನವಿ ಮಾಡುತ್ತಲೇ ಬಂದಿದ್ದರು.
ಪಂಚಾಯಿತಿ ಆಡಳಿತ ಕೊನೆಗೊಳ್ಳಲು ಒಂದು ವರ್ಷ ಬಾಕಿ ಇರುವಾಗ ಸರ್ಕಾರ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಒಪ್ಪಿಗೆ ನೀಡಿದೆ. ಈ ಗ್ರಾಮ ಪಂಚಾಯಿತಿಗೆ ಹಾಲಿ ತ್ಯಾಮಗೊಂಡ್ಲು ಪಟ್ಟಣ, ತಿಪ್ಪಶೆಟ್ಟಿಹಳ್ಳಿ, ಗುಂಡೇನಹಳ್ಳಿ, ಧರ್ಮೇಗೌಡನ ಪಾಳ್ಯಗಳು ಸೇರಿ ಒಟ್ಟು ಒಂಬತ್ತು ವಾರ್ಡ್ಗಳಿದ್ದು, 21 ಮಂದಿ ಪಂಚಾಯಿತಿ ಸದಸ್ಯರು ಇದ್ದಾರೆ.
‘ಪಂಚಾಯಿತಿ ಆಡಳಿತದಲ್ಲಿ ಅನುದಾನಗಳು ಕಡಿಮೆ ಇದ್ದು, ಅಭಿವೃದ್ಧಿ ಸಾಧ್ಯವಿರಲಿಲ್ಲ. ಈಗ ಪಟ್ಟಣ ಪಂಚಾಯಿತಿ ಆಗಿರುವುದರಿಂದ ಹೆಚ್ಚಿನ ಅನುದಾನ ಬರಲಿದೆ. ಇದರಿಂದ ಜನರ ಮೂಲಭೂತ ಸಮಸ್ಯೆಗಳನ್ನು ನಿವಾರಿಸಲು ಸಹಾಯವಾಗುತ್ತದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯರು ಅಭಿಪ್ರಾಯಪಟ್ಟರು.
ಸ್ವಾತಂತ್ಯ್ರ ಸಂಗ್ರಾಮದಲ್ಲಿ ವೇಳೆ ಮಹಾತ್ಮ ಗಾಂಧೀಜಿ, ತ್ಯಾಮಗೊಂಡ್ಲು ಪಟ್ಟಣಕ್ಕೆ ಭೇಟಿ ನೀಡಿದ್ದರು. ಗಾಂಧೀಜಿ ಭೇಟಿ ನೀಡಿದ ಸ್ಮರಣಾರ್ಥ ಹಳೆಯ ಗ್ರಾಮ ಪಂಚಾಯಿತಿಯ ಸಮೀಪದ ವೃತ್ತಕ್ಕೆ ಮಹಾತ್ಮ ಗಾಂಧೀಜಿ ವೃತ್ತ ಎಂದು ಹೆಸರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.