ADVERTISEMENT

ಅವಲಹಳ್ಳಿ: ಮೇಲ್ಸೇತುವೆಯಿಂದಲೇ ಹೆಚ್ಚಿದ ಸಂಚಾರ ದಟ್ಟಣೆ

ಅವೈಜ್ಞಾನಿಕ ನಿರ್ಮಾಣ: ನಾಗರಿಕರ ದೂರು

ಪ್ರಜಾವಾಣಿ ವಿಶೇಷ
Published 13 ಆಗಸ್ಟ್ 2023, 22:15 IST
Last Updated 13 ಆಗಸ್ಟ್ 2023, 22:15 IST
ಆವಲಹಳ್ಳಿ ಬಳಿಯ ಮೇಲ್ಸೇತುವೆಯಿಂದ ಸಂಚಾರ ದಟ್ಟಣೆ ಉಂಟಾಗುತ್ತಿರುವುದು.
ಆವಲಹಳ್ಳಿ ಬಳಿಯ ಮೇಲ್ಸೇತುವೆಯಿಂದ ಸಂಚಾರ ದಟ್ಟಣೆ ಉಂಟಾಗುತ್ತಿರುವುದು.   

-ಶಿವರಾಜ್ ಮೌರ್ಯ

ಕೆ.ಆರ್.ಪುರ: ಹಳೇ ಮದ್ರಾಸ್ ರಸ್ತೆಯ ಆವಲಹಳ್ಳಿ ಬಳಿ ನಿರ್ಮಿಸಿರುವ ಮೇಲ್ಸೇತುವೆಯಿಂದ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಾಗಿ ದಿನ ನಿತ್ಯ ವಾಹನ ಸವಾರರು ನರಕಯಾತನೆ ಅನುಭವಿಸುವಂತಾಗಿದೆ‌.

ನಗರದಿಂದ ಹೊಸಕೋಟೆ, ಕೋಲಾರ ಮೂಲಕ ಚೆನ್ನೈ ಗೆ ಸಂಪರ್ಕ ಕಲ್ಪಿಸುವ ಹಳೇ ಮದ್ರಾಸ್ ರಸ್ತೆಯ ಆವಲಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು 12 ವರ್ಷಗಳ ಹಿಂದೆ ಮೇಲ್ಸೇತುವೆ ನಿರ್ಮಾಣ ಮಾಡಿತ್ತು. ಅವೈಜ್ಞಾನಿಕವಾಗಿ ನಿರ್ಮಿಸಿರುವುದರಿಂದ ಎಂಟು ಹಳ್ಳಿಗಳಿಗೆ ಸಂಪರ್ಕಿಸಲು ಇರುವ ಅಂಡರ್‌ಪಾಸ್‌ ಕಿರಿದಾಗಿ ವಾಹನ ಸಂಚರಿಸುವುದೇ ಹರಸಾಹಸವಾಗಿದೆ ಎಂದು ನಾಗರಿಕರು ದೂರಿದ್ದಾರೆ.

ADVERTISEMENT

ಅವಲಹಳ್ಳಿ ಸುತ್ತಮುತ್ತಲೂ 10ಕ್ಕೂ ಹೆಚ್ಚು ಶಾಲೆಗಳಿವೆ. ಅಲ್ಲದೆ, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು, ಗ್ರಾಮ ಪಂಚಾಯಿತಿ ಕಚೇರಿ, ನಾಲ್ಕು ಬ್ಯಾಂಕ್‌ಗಳು, ಅಂಚೆ ಕಚೇರಿ ಮತ್ತು ಪುರಾತನ ಪ್ರಸಿದ್ಧ ಮುನೇಶ್ವರಸ್ವಾಮಿ ದೇವಸ್ಥಾನ ಇರುವುದರಿಂದ ನಿತ್ಯ ಸಾವಿರಾರು ಮಂದಿ ಇಲ್ಲಿ ಸಂಚರಿಸುತ್ತಾರೆ. ಬೆಳಿಗ್ಗೆ ಮತ್ತು ಸಂಜೆಯ ಹೊತ್ತಿನಲ್ಲಿ ಸೇತುವೆಯ ಎರಡೂ ಭಾಗಗಳಲ್ಲಿ ಒಂದು ಕಿಲೋ ಮೀಟರ್‌ಗಿಂತಲೂ ಹೆಚ್ಚು ಉದ್ದ ವಾಹನಗಳ ಸಾಲು ಇರುತ್ತದೆ ಎಂದು ಮಾನವ ಹಕ್ಕುಗಳ ಜಾಗೃತಿ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ್ ಸಿಂಗ್ ದೂರಿದರು.

ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ಸಂಚಾರಕ್ಕೂ ತೊಂದರೆಯಾಗುತ್ತಿದೆ. ಮಳೆ ಬಂದರೆ ಅಂಡರ್‌ ಪಾಸ್‌ನಲ್ಲಿ ಎರಡು ಅಡಿಯಷ್ಟು ಎತ್ತರ ನೀರು ನಿಲ್ಲುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಬಗ್ಗೆ ಹಲವಾರು ಬಾರಿ ಸ್ಥಳೀಯ ಜನ ಪ್ರತಿನಿಧಿಗಳ ಗಮನಕ್ಕೆ ತಂದರೂ ಸಮಸ್ಯೆ ಪರಿಹಾರವಾಗಿಲ್ಲ. ಸಮಸ್ಯೆಯನ್ನು ಬಗೆಹರಿಸದಿದ್ದರೆ ಮುಂದಿನ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡಲಾಗುವುದು ಎಂದು ಸ್ಥಳೀಯ ಆನಂದ್ ಬಾಬು ಎಚ್ಚರಿಸಿದರು.

ಸಾಲು ಸಾಲು ವಾಹನಗಳು ನಿಂತಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.