ADVERTISEMENT

‘ಅಸ್ಪೃಶ್ಯತೆ ಬಂದಿರುವುದು ಶೂದ್ರರಿಂದ’: ಅಗ್ನಿ ಶ್ರೀಧರ್‌

​ಪ್ರಜಾವಾಣಿ ವಾರ್ತೆ
Published 4 ಜೂನ್ 2025, 14:44 IST
Last Updated 4 ಜೂನ್ 2025, 14:44 IST
   

ಬೆಂಗಳೂರು: ‘ಅಸ್ಪೃಶ್ಯತೆ ಬ್ರಾಹ್ಮಣರಿಂದ ಬಂದಿದೆ ಎಂಬುದು ಸರಿಯಲ್ಲ, ಶೂದ್ರರಿಂದಲೇ ಬಂದಿರುವುದು’ ಎಂದು ಪತ್ರಕರ್ತ ಅಗ್ನಿ ಶ್ರೀಧರ್‌ ತಿಳಿಸಿದರು.

ಸಮತಾ ಸೈನಿಕ ದಳ (ಎಸ್‌ಎಸ್‌ಡಿ) ಬುಧವಾರ ಹಮ್ಮಿಕೊಂಡಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ 141ನೇ ಜಯಂತಿ, ಎಸ್‌ಎಸ್‌ಡಿ ರಾಷ್ಟ್ರೀಯ ಅಧ್ಯಕ್ಷ ಎಂ.ವೆಂಕಟಸ್ವಾಮಿ ಅವರ 72ನೇ ಜನ್ಮ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಪರಿವರ್ತನಾ ಸಮಾವೇಶದಲ್ಲಿ ಅವರು ಮಾತನಾಡಿದರು.

ಶೂದ್ರರು ಬ್ರಾಹ್ಮಣರಿಗೆ ಶರಣಾಗಿ ಅವರು ಹೇಳುವ ಕಟ್ಟುಪಾಡುಗಳನ್ನು ಪಾಲಿಸಲು ಒಪ್ಪಿಕೊಂಡಿದ್ದರು. ಅದನ್ನು ಒಪ್ಪದವರೇ ಅಸ್ಪೃಶ್ಯರಾದರು. ಹೊಲೆಯರು, ಮಾದಿಗರೆಲ್ಲ ಒಂದು ಕಾಲದಲ್ಲಿ ಒಕ್ಕಲಿಗರೇ ಆಗಿದ್ದರು ಎಂದು ಅಭಿಪ್ರಾಯಪಟ್ಟರು.

ADVERTISEMENT

ಮೀಸಲಾತಿ ತೆಗೆದರೆ ಒಬ್ಬನೇ ಒಬ್ಬ ದಲಿತ ಗೆಲ್ಲಲು ಸಾಧ್ಯವಿಲ್ಲ. ಹಾಗಾಗಿ ಮೀಸಲಾತಿ ಅಗತ್ಯ ಎಂದು ಪ್ರತಿಪಾದಿಸಿದರು.

ಸಂಸದ ಡಾ. ಸಿ.ಎನ್‌. ಮಂಜುನಾಥ್‌ ಮಾತನಾಡಿ, ‘ಒಬ್ಬರು ಎಲ್ಲರಿಗೂ ಸಹಾಯ ಮಾಡಲು ಆಗುವುದಿಲ್ಲ. ಎಲ್ಲರೂ ಒಬ್ಬೊಬ್ಬರಿಗೆ ಸಹಾಯ ಮಾಡಲು ಸಾಧ್ಯ. ಹಳಸಿದ್ದನ್ನು ಕೊಡುವ ಬದಲು ಉಳಿಸಿದ್ದನ್ನು ಕೊಡಬೇಕು. ಕಿತ್ತು ತಿನ್ನಬಾರದು. ಹಂಚಿ ತಿನ್ನಬೇಕು. ಇನ್ನೊಬ್ಬರಿಗೆ ಸಹಾಯ ಮಾಡಿದರೆ ಜಾಸ್ತಿ ದಿನ ಬದುಕುತ್ತೇವೆ’ ಎಂದು ಹೇಳಿದರು.

‘ನಮಗೆ ನೋವಾಗುವುದು ಅರಿವಾದರೆ ನಾವು ಜೀವಂತ ಇದ್ದೇವೆ ಎಂದರ್ಥ. ಬೇರೆಯವರ ನೋವು ಅರ್ಥವಾದರೆ ನಾವು ಮನುಷ್ಯರು ಎಂದರ್ಥ. ಜ್ಞಾನದ ಭಾಷೆಗಿಂತ ಹೃದಯದ ಭಾಷೆ ಮಿಗಿಲು’ ಎಂದರು.

ಹೋರಾಟಗಾರ್ತಿ ಬಿ.ಟಿ. ಲಲಿತಾನಾಯಕ್‌ ಮಾತನಾಡಿ, ‘ಒಂದು ಕಡೆಯಿಂದ ದಲಿತ ಸಮುದಾಯದವರು ಬೆಳೆಯುತ್ತಿದ್ದಾರೆ. ಇನ್ನೊಂದು ಕಡೆಯಿಂದ ಬೀಳುತ್ತಿದ್ದಾರೆ. ಇದರ ಬಗ್ಗೆ ವಿಮರ್ಶೆ ನಡೆಯಬೇಕು’ ಎಂದು ಹೇಳಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರಶಸ್ತಿಯನ್ನು ನಾರಾಯಣ ಕುಮಾರ್ ಅವರಿಗೆ ಮರಣೋತ್ತರವಾಗಿ ನೀಡಿದ್ದು, ಅವರ ಮಗ ಗುರುದೇವ್‌ ನಾರಾಯಣ ಕುಮಾರ್‌ ಪ್ರಶಸ್ತಿ ಸ್ವೀಕರಿಸಿದರು. ನಾಗಸೇನಾ ಬುದ್ಧವಿಹಾರದ ಬಿಕ್ಕುಣಿ ಬುದ್ಧಮ್ಮ ಪಂಚಶೀಲ ತತ್ವ ಬೋಧಿಸಿದರು. ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ಎಂ. ವೆಂಕಟಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.