ಬೆಂಗಳೂರು: ಮೆಜೆಸ್ಟಿಕ್ ಸಮೀಪದ ಮೂವಿಲ್ಯಾಂಡ್ ಚಿತ್ರಮಂದಿರದ ಬಳಿ ವಾಹನಗಳ ತಪಾಸಣೆ ಮಾಡುತ್ತಿದ್ದ ವೇಳೆಯಲ್ಲೇ ಪಿಎಸ್ಐ ಗಂಗಸಿದ್ದಯ್ಯ (56) ಎಂಬುವರು ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.
ಮಾಗಡಿ ತಾಲ್ಲೂಕಿನ ಅವರು ಉಪ್ಪಾರಪೇಟೆ ಸಂಚಾರ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು. ಕಾನ್ಸ್ಟೆಬಲ್ ಆಗಿ ಇಲಾಖೆಗೆ ಸೇರಿದ್ದ ಅವರು ಆರು ತಿಂಗಳ ಹಿಂದಷ್ಟೇ ಪಿಎಸ್ಐ ಆಗಿ ಬಡ್ತಿ ಪಡೆದಿದ್ದರು.
‘ಮದ್ಯಪಾನ ಮಾಡಿ ವಾಹನ ಚಲಾಯಿಸುವವರನ್ನು ಪತ್ತೆ ಮಾಡುವ ವಿಶೇಷ ಕಾರ್ಯಾಚರಣೆಗೆ ಗಂಗಸಿದ್ದಯ್ಯ ಅವರನ್ನು ನಿಯೋಜಿಸಲಾಗಿತ್ತು. ರಾತ್ರಿ 9 ಗಂಟೆ ಸುಮಾರಿಗೆ ವಾಹನಗಳನ್ನು ತಡೆದು ಚಾಲಕರನ್ನು ತಪಾಸಣೆಗೆ ಒಳಪಡಿಸುತ್ತಿದ್ದರು. ಅದೇ ವೇಳೆಯೇ ಸ್ಥಳದಲ್ಲೇ ಕುಸಿದು ಬಿದ್ದಿದ್ದರು’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘ಗಂಗಸಿದ್ದಯ್ಯ ಅವರನ್ನು ಕೂಡಲೇ ಮಲ್ಲಿಗೆ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಸ್ಥಳದಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದರು’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.