ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಇತ್ತೀಚೆಗೆ ನಡೆಸಿದ್ದ ಪೂರ್ವಭಾವಿ ಪರೀಕ್ಷೆಗೆ ಹಾಜರಾಗಿದ್ದ ಯುವತಿಯೊಬ್ಬರು ನಾಪತ್ತೆಯಾಗಿದ್ದು, ಈ ಸಂಬಂಧ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ತುಮಕೂರು ನಿವಾಸಿ ಶಿಲ್ಪಾ (23) ಅವರು ನಾಪತ್ತೆಯಾಗಿರುವ ಬಗ್ಗೆ ತಂದೆ ದೂರು ನೀಡಿದ್ದಾರೆ. ಎಫ್ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಶಿಲ್ಪಾ ಅವರು ಆಂಧ್ರಪ್ರದೇಶದಲ್ಲಿರುವ ಸಂಸ್ಥೆಯೊಂದರಲ್ಲಿ ಬ್ಯಾಂಕಿಂಗ್ ಪರೀಕ್ಷೆ ತರಬೇತಿ ಪಡೆಯುತ್ತಿದ್ದರು. ಇದರ ನಡುವೆಯೇ ಯುಪಿಎಸ್ಸಿ ಪರೀಕ್ಷೆ ಕಟ್ಟಿದ್ದರು. ಬೆಂಗಳೂರಿನಲ್ಲಿರುವ ಕೇಂದ್ರದಲ್ಲಿ ಪರೀಕ್ಷೆ ಇತ್ತು. ಹೀಗಾಗಿ, ಪರೀಕ್ಷೆಗೂ ಮುನ್ನ ತುಮಕೂರಿಗೆ ಬಂದು ಉಳಿದುಕೊಂಡಿದ್ದರು.’
‘ತುಮಕೂರಿನಿಂದ ಬಸ್ನಲ್ಲಿ ಬಂದು ಜುಲೈ 2ರಂದು ಯುಪಿಎಸ್ಸಿ ಪರೀಕ್ಷೆ ಬರೆದಿದ್ದ ಶಿಲ್ಪಾ, ವಾಪಸು ಊರಿಗೆ ಹೋಗಲು ಬಸ್ ಹತ್ತಿದ್ದರು. ಬೆಂಗಳೂರಿನಲ್ಲಿರುವ ಸಹೋದರ ಬಸ್ ಹತ್ತಿಸಿದ್ದರು. ಆದರೆ, ಶಿಲ್ಪಾ ಮನೆಗೆ ಹೋಗಿಲ್ಲ. ಗಾಬರಿಗೊಂಡ ಪೋಷಕರು, ಎಲ್ಲ ಕಡೆ ಹುಡುಕಿದರೂ ಸುಳಿವು ಸಿಕ್ಕಿಲ್ಲ’ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.