ADVERTISEMENT

ಹೈ–ಕ ನೌಕರರ ಜೇಷ್ಠತೆ ಪ್ರತ್ಯೇಕವಾಗಿ ಪರಿಗಣಿಸಿ: ಹಸಿರು ಪ್ರತಿಷ್ಠಾನ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2024, 16:04 IST
Last Updated 2 ಏಪ್ರಿಲ್ 2024, 16:04 IST

ಬೆಂಗಳೂರು: ‘ಹೈದರಾಬಾದ್ ಕರ್ನಾಟಕ (ಹೈ–ಕ) ವಲಯಕ್ಕೆ ಸಂಬಂಧಿಸಿದ ಹುದ್ದೆಗಳ ನೇಮಕಾತಿ ಮತ್ತು ಮುಂಬಡ್ತಿ ಸಂದರ್ಭದಲ್ಲಿ, ಆಯಾ ನೌಕರರ ಜೇಷ್ಠತೆಯನ್ನು ಪ್ರತ್ಯೇಕವಾಗಿ ಪರಿಗಣಿಸಬೇಕೆಂಬ ನಿಯಮವಿದೆ. ಆದರೆ, ಆ ನಿಯಮ ಪಾಲನೆ ಆಗುತ್ತಿಲ್ಲ’ ಎಂದು ಹಸಿರು ಪ್ರತಿಷ್ಠಾನ ದೂರಿದೆ.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಪ್ರತಿಷ್ಠಾನದ ಅಧ್ಯಕ್ಷ ಕೆ.ಜಿ. ಕುಮಾರ್, ‘ಸಂವಿಧಾನಕ್ಕೆ 371–ಜೆ ಅಡಿ ತಿದ್ದುಪಡಿ ಮಾಡುವುದರ ಮೂಲಕ ಶಿಕ್ಷಣ, ಉದ್ಯೋಗ ಮತ್ತು ಇತರ ವಿಷಯಗಳಲ್ಲಿ ಹೈದರಾಬಾದ್ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಮೀಸಲಾತಿ ನೀಡಲಾಗಿದೆ. ಇದರಿಂದ ರಾಜ್ಯದ ಇತರೆ ಭಾಗದವರು ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಆದರೆ, ರಾಜ್ಯ ಸರ್ಕಾರವು 371–ಜೆ ಅಡಿ ಅನೇಕ ಸರ್ಕಾರಿ ಆದೇಶಗಳನ್ನು ಹೊರಡಿಸಿ, ರಾಜ್ಯಮಟ್ಟದ ವ್ಯಾಪ್ತಿಯಲ್ಲಿ ಇಲ್ಲದ ಬಿಬಿಎಂಪಿ, ಬಿಡಿಎ ಕಚೇರಿಗಳಲ್ಲಿನ ಹುದ್ದೆಗಳ ನೇಮಕಾತಿ ಸಂದರ್ಭದಲ್ಲಿ ಶೇ 8ರಷ್ಟು ಮೀಸಲಾತಿ ನೀಡುವುದರ ಮೂಲಕ ರಾಜ್ಯದ ಬೇರೆ ವಿಭಾಗದ ಜನರಿಗೆ ಅನ್ಯಾಯ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.

‘ಹೈದರಾಬಾದ್‌ ಕರ್ನಾಟಕ ವಲಯದಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಪ್ರತ್ಯೇಕವಾಗಿ (ಇತರೆ ಕರ್ನಾಟಕದ ಭಾಗದ ಖಾಲಿ ಹುದ್ದೆಗಳನ್ನು ಬಿಟ್ಟು) ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೆ, ಇತರೆ ಕರ್ನಾಟಕ ಭಾಗದ ನೌಕರರನ್ನು ಭರ್ತಿ ಮಾಡದೇ ಕೇವಲ ಹೈದರಾಬಾದ್ ಕರ್ನಾಟಕದ ಅಭ್ಯರ್ಥಿಗಳನಷ್ಟೆ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಇದರಿಂದ, ಎಲ್ಲ ಇಲಾಖೆಗಳಲ್ಲಿ ಹೈದರಾಬಾದ್ ಕರ್ನಾಟಕ ಭಾಗದ ನೌಕರರು ಜೇಷ್ಠತೆಯಲ್ಲಿ ಹಿರಿಯರಾಗಿ ಎಲ್ಲ ಉನ್ನತ ಹುದ್ದೆಗಳಿಗೆ ನೇಮಕಗೊಳ್ಳುತ್ತಿದ್ದಾರೆ’ ಎಂದರು.

ADVERTISEMENT

ಇತಿಹಾಸಕಾರ ತಲಕಾಡು ಚಿಕ್ಕರಂಗೇಗೌಡ, ಪ್ರತಿಷ್ಠಾನದ ಉಪಾಧ್ಯಕ್ಷ ಲಕ್ಷ್ಮೀ ಶ್ರೀನಿವಾಸ್, ಪೋಷಕ ಕೆ.ಸಿ. ಶಿವರಾಂ, ಸಂಚಾಲಕರಾದ ಮಂಜುನಾಥ ರೆಡ್ಡಿ, ಜೆ.ಪಿ. ಕಾಡೇಗೌಡ, ಕೆ. ಪ್ರಕಾಶ್ ಗೌಡ, ಶಾಂತಲಾ ಸುರೇಶ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.