ಬೆಂಗಳೂರು: ಬೆಂಗಳೂರಿನಲ್ಲಿ ಅಮೆರಿಕದ ಕಾನ್ಸುಲೇಟ್ ಕಚೇರಿ ತೆರೆಯುವ ಅಗತ್ಯ ಕೇಂದ್ರದ ಗಮನಕ್ಕೆ ಬಂದಿದೆ. ಅಮೆರಿಕಕ್ಕೂ ಇದನ್ನು ತಿಳಿಸಲಾಗಿದೆ. ಕಚೇರಿ ತೆರೆಯುವ ಬಗ್ಗೆ ಅಮೆರಿಕವೇ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ವಿದೇಶಾಂಗ ವ್ಯವಹಾರ ಸಚಿವ ಡಾ.ಎಸ್.ಜೈಶಂಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಅಮೆರಿಕದ ಕಾನ್ಸುಲೇಟ್ ಕಚೇರಿ ತೆರೆಯಲು ಪ್ರಯತ್ನಿಸಬೇಕು ಎಂದು ಬಿಜೆಪಿ ರಾಜ್ಯ ಸಹ ವಕ್ತಾರ ಎ.ಎಚ್.ಆನಂದ್ ಅವರು ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡರ ಮೂಲಕ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿ ಸಚಿವರು ಈ ಉತ್ತರ ನೀಡಿದ್ದಾರೆ.
‘ಪ್ರಧಾನಿ 2016ರಲ್ಲಿ ಅಮೆರಿಕಕ್ಕೆ ಭೇಟಿ ನೀಡಿದಾಗ, ಎರಡೂ ದೇಶಗಳಿಗೆ ಅಗತ್ಯವಾದ ಹೆಚ್ಚುವರಿ ರಾಜತಾಂತ್ರಿಕ ಕಚೇರಿ ತೆರೆಯುವ ನಿಟ್ಟಿನಲ್ಲಿ ಬದ್ಧತೆ ಪ್ರದರ್ಶಿಸಲಾಗಿತ್ತು. ಅಮೆರಿಕದ ಸಿಯಾಟೆಲ್ನಲ್ಲಿ ರಾಜತಾಂತ್ರಿಕ ಕಚೇರಿ ತೆರೆಯುವುದಾಗಿ ಭಾರತ ಹೇಳಿತ್ತು. ಭಾರತದ ನಗರವೊಂದರಲ್ಲಿ ಕಾನ್ಸುಲೇಟ್ ಕಚೇರಿ ತೆರೆಯಲೂ ಅಮೆರಿಕ ಒಪ್ಪಿತ್ತು. ಅಮೆರಿಕದೊಂದಿಗೆ ಬೆಂಗಳೂರಿಗೆ ಪ್ರಬಲ ಆರ್ಥಿಕ, ಸಾಮಾಜಿಕ ನಂಟು ಇರುವುದರಿಂದ ಬೆಂಗಳೂರಿನಲ್ಲಿ ಕಾನ್ಸುಲೇಟ್ ಕಚೇರಿ ತೆರೆಯಲು ಉತ್ಸಾಹ ತೋರಬಹುದು. ಆದರೂ ಅಮೆರಿಕವೇ ಈ ವಿಷಯದಲ್ಲಿ ನಿರ್ಧಾರ ಕೈಗೊಳ್ಳಬೇಕಷ್ಟೆ’ ಎಂದು ಸಚಿವರು ಉತ್ತರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.