ಬೆಂಗಳೂರು: ವಸತಿ ಸಮುಚ್ಚಯಗಳು, ಬೃಹತ್ ವಾಣಿಜ್ಯ ಕಟ್ಟಡಗಳಲ್ಲಿ ಸಂಸ್ಕರಿಸಿದ ತ್ಯಾಜ್ಯ ನೀರು ಬಳಕೆ ಮಾಡುವುದನ್ನು ಕಡ್ಡಾಯಗೊಳಿಸುವ ಕಾನೂನು ಜಾರಿಯಾಗಬೇಕು ಎಂದು ಪರಿಸರ ತಜ್ಞ ಅ.ನ. ಯಲ್ಲಪ್ಪರೆಡ್ಡಿ ಅಭಿಪ್ರಾಯಪಟ್ಟರು.
ಬೆಂಗಳೂರು ಜಲಮಂಡಳಿ ಎಂಜಿನಿಯರ್ ಸಂಘದಿಂದ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ‘ಪ್ಲಾಸ್ಟಿಕ್ ತ್ಯಾಜ್ಯ ಕೊನೆಗಾಣಿಸಿ’ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಸಂಸ್ಕರಿಸಿದ ತ್ಯಾಜ್ಯ ನೀರು ಬಳಕೆಯಿಂದ ಕಾವೇರಿ ನೀರಿನ ಅವಲಂಬನೆ ತಪ್ಪಲಿದೆ. ಜೊತೆಗೆ ಬೆಂಗಳೂರಿನ ರಾಜಕಾಲುವೆಗಳಲ್ಲಿ ಮಳೆ ನೀರು ಇಂಗಿಸಲು ಸೂಕ್ತ ವ್ಯವಸ್ಥೆ ಮಾಡಬೇಕು. ಇದರಿಂದ ಅಂತರ್ಜಲ ಮರುಪೂರಣಕ್ಕೆ ಅನುಕೂಲವಾಗಲಿದೆ’ ಎಂದರು.
ಬ್ರಿಗೇಡಿಯರ್ ಡಿ.ಎಂ. ಪೂರ್ವಿಮಠ್, ಜಲಮಂಡಳಿಯ ಆಡಳಿತಾಧಿಕಾರಿ ಮದನ್ ಮೋಹನ್, ಪ್ರಧಾನ ಎಂಜಿನಿಯರ್ ಬಿ. ಸುರೇಶ್, ಬೆಂಗಳೂರು ಜಲಮಂಡಳಿ ಎಂಜಿನಿಯರ್ಗಳ ಸಂಘದ ಅಧ್ಯಕ್ಷ ಬಿ.ಸಿ. ಗಂಗಾಧರ್, ಉಪಾಧ್ಯಕ್ಷ ರಮಾನಂದ, ಕಾರ್ಯದರ್ಶಿ ಎ. ರಾಜಶೇಖರ, ಖಜಾಂಚಿ ಎಸ್. ಚಂದ್ರಶೇಖರ್ ಉಪಸ್ಥಿತರಿದ್ದರು.
ಗಿಡ ನೆಟ್ಟರು: ಬೆಂಗಳೂರು ವಿಶ್ವವಿದ್ಯಾಲಯದ ಬಯೋ ಪಾರ್ಕ್ನಲ್ಲಿ ಸ್ವಯಂ ಜಾಗೃತಿ ಸೇವಾ ಟ್ರಸ್ಟ್ ಸದಸ್ಯರು ನೂರಾರು ಗಿಡಗಳನ್ನು ನೆಟ್ಟರು. ಟ್ರಸ್ಟ್ನ ರಾಜ್ಯ ಘಟಕದ ಅಧ್ಯಕ್ಷ ಅಜಯ್ ಕುಮಾರ್, ಸಂತೋಷ್ ಹಿಂಬಾಳೆ, ಮಲ್ಲೇಶ್, ಶರಣ್ ಸಿ. ಪಾಟೀಲ್, ಮಂಜು, ವಿನಾಯಕ, ನಿತಿನ್, ಚರಣ್, ವೇದಾಂತ್, ಸೋಮಶೇಖರ, ಚೇತನ್, ಮೂರ್ತಿ, ಸುನಿಲ್ ಹಾಗೂ ತಂಡದ ಪ್ರಚಾರ ಸಮಿತಿ ಅಧ್ಯಕ್ಷ ಶ್ರೀಕಾಂತ್ ಕನ್ನಡಿಗ ಮತ್ತು ಪರಿಸರ ಕಾರ್ಯಕರ್ತ ರೇಣುಕಾ ಪ್ರಸಾದ್ ಭಾಗವಹಿಸಿದ್ದರು.
ಅಮ್ಮನ ಹೆಸರಿನಲ್ಲಿ ಗಿಡ: ಶಿಕ್ಷಣ ಸಚಿವಾಲಯದ ರಾಷ್ಟ್ರೀಯ ಉಪಕ್ರಮ ‘ಏಕ್ ಪೇಡ್ ಮಾ ಕೆ ನಾಮ್’ನ ಭಾಗವಾಗಿ, ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯ ವಿದ್ಯಾರ್ಥಿಗಳು ಎಂಇಜಿ ಕೇಂದ್ರದಲ್ಲಿ ಗಿಡ ನೆಟ್ಟರು.
ಶಾಲೆಗೆ ರಜೆಯಿದ್ದರೂ ಹಲವು ವಿದ್ಯಾರ್ಥಿಗಳು ಅಭಿಯಾನದಲ್ಲಿ ಭಾಗವಹಿಸಿದ್ದರು. ಸೆಪ್ಟೆಂಬರ್ 30ರವರೆಗೆ ಅಭಿಯಾನ ಮುಂದುರಿಯಲಿದ್ದು, ಎಲ್ಲಾ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಗಿಡ ನೆಡಲಿದ್ದಾರೆ. ಈ ಅಭಿಯಾನಡಿ ನಡೆಸಲಾದ ಎಲ್ಲಾ ನೆಡುತೋಪುಗಳ ಡಿಜಿಟಲ್ ದಾಖಲೆಯನ್ನು ಶಾಲೆಯು ನಿರ್ವಹಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.