ADVERTISEMENT

ವಚನ ಬಿತ್ತನೆ ಒಳ್ಳೆಯ ಕಾರ್ಯ: ಮಹಾಂತೇಶ ಬಿರಾದರ್

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 20:16 IST
Last Updated 23 ಆಗಸ್ಟ್ 2025, 20:16 IST
ವಚನಜ್ಯೋತಿ ಬಳಗ ಆಯೋಜಿಸಿದ್ದ ವಚನ ಶ್ರಾವಣ ಕಾರ್ಯಕ್ರಮದ ಸಮಾರೋಪದಲ್ಲಿ ಬಸವಣ್ಣನವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಲಾಯಿತು
ವಚನಜ್ಯೋತಿ ಬಳಗ ಆಯೋಜಿಸಿದ್ದ ವಚನ ಶ್ರಾವಣ ಕಾರ್ಯಕ್ರಮದ ಸಮಾರೋಪದಲ್ಲಿ ಬಸವಣ್ಣನವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಲಾಯಿತು   

ಬೆಂಗಳೂರು: ‘ಶ್ರಾವಣ ಮಾಸದ ಪ್ರಯುಕ್ತ ಮಕ್ಕಳಲ್ಲಿ ವಚನ ಬಿತ್ತನೆ ನಡೆಸಿರುವುದು ಸಾರ್ಥಕ ಕಾರ್ಯ’ ಎಂದು ವಚನ ತತ್ವ ಚಿಂತಕ‌ ಮಹಾಂತೇಶ ಬಿರಾದರ್ ಶ್ಲಾಘಿಸಿದರು.

ವಚನಜ್ಯೋತಿ ಬಳಗ ವಿಜಯನಗರದಲ್ಲಿ ಆಯೋಜಿಸಿದ್ದ ವಚನ ಶ್ರಾವಣ ಸಮಾರೋಪದಲ್ಲಿ ಅವರು ಮಾತನಾಡಿದರು.

ಶಾಲೆಗಳಲ್ಲಿಯೇ ವಚನ ಶ್ರಾವಣ ನಡೆಸಿ ಅವುಗಳ ಅರ್ಥವನ್ನು ಮನದಟ್ಟು ಮಾಡಿಕೊಟ್ಟಿರುವುದರಿಂದ ವಿದ್ಯಾರ್ಥಿಗಳು ಸುಂದರ ಬದುಕನ್ನು‌ ರೂಪಿಸಿಕೊಳ್ಳಲು ಅನುಕೂಲವಾಗುತ್ತದೆ. ಕರ್ನಾಟಕದಾದ್ಯಂತ ವಚನ ಶ್ರಾವಣ ನಡೆಯಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.

ADVERTISEMENT

ಮೆಸ್ಕಾಂ ಪ್ರಧಾನ ವ್ಯವಸ್ಥಾಪಕ ಬಿ.ಎಸ್. ಮಂಜುನಾಥಸ್ವಾಮಿ ಮಾತನಾಡಿ, ‘ವಚನಗಳ ತಿರುಳು‌ ಮಕ್ಕಳ ಮನ ಮುಟ್ಟಿದರೆ ಅದರ ವ್ಯಾಪಕತೆ ಬಹು ದೊಡ್ಡದಾಗಿ ಬೆಳೆದು ಒಳ್ಳೆಯ ಸಮಾಜ ನಿರ್ಮಾಣವಾಗುತ್ತದೆ. ಬಸವಣ್ಣ ಬಯಸಿದ ಕಲ್ಯಾಣ ರಾಜ್ಯಕ್ಕೆ ವಚನ ಶ್ರಾವಣ ಮುನ್ನುಡಿಯಾಗಿದೆ’ ಎಂದರು.

ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ಮಾತನಾಡಿ, ‘ಕನ್ನಡ ನಾಡಿನಲ್ಲಿ ವಿಚಾರಕ್ರಾಂತಿಯನ್ನು ಬಿತ್ತಿ ಸಮಸಮಾಜ ನಿರ್ಮಾಣ ಮಾಡಿ ವರ್ಗ, ವರ್ಣ ಭೇದವನ್ನು ನಿರ್ಮೂಲನಗೈದು, ಸ್ತ್ರೀಗೆ ಸಮಾನತೆ ನೀಡಿ ಕಾಯಕದ ಮಹಾಮಂತ್ರವನ್ನು ಉಸುರಿ, ದಾಸೋಹಪ್ರೇಮವನ್ನು ಹರಡಿ, ತಿಳಿಗನ್ನಡದಲ್ಲಿ ವಚನಗಳನ್ನು ನೀಡಿದ ಮಹಾತ್ಮ ಬಸವಣ್ಣ. ಅವರ ಸಂದೇಶವನ್ನು ಶ್ರಾವಣ ಮಾಸದಲ್ಲಿ ವಚನ ಶ್ರಾವಣದ ಮೂಲಕ ಮೂವತ್ತಾರು ಅಂಗಳಗಳಲ್ಲಿ ನಡೆಸಿ ಮೌಢ್ಯಾಚರಣೆಗಳ ವಿರುದ್ದ ಜಾಗೃತಿ ಮೂಡಿಸಲಾಗಿದೆ’ ಎಂದು ತಿಳಿಸಿದರು. 

ಗುರುವಣ್ಣದೇವರ ಮಠದ ನಂಜುಂಡ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಬಸವ ಸಮಿತಿಯ‌ ಹಿರಿಯ ಉಪಾಧ್ಯಕ್ಷ ಪ್ರಭುದೇವ ಚಿಗಟೇರಿ, ಮಾಜಿ‌ ಮೇಯರ್ ಗಂಗಾಂಬಿಕೆ‌ ಮಲ್ಲಿಕಾರ್ಜುನ್, ಬಳಗದ ಗೌರವಾಧ್ಯಕ್ಷ ಮಹೇಶ‌ ಬೆಲ್ಲದ, ಕಾರ್ಯಾಧ್ಯಕ್ಷ ಗುರುಪ್ರಸಾದ ಕುಚ್ಚಂಗಿ, ಪ್ರಧಾನ ಕಾರ್ಯದರ್ಶಿ ಪ್ರಭು ಇಸುವನಹಳ್ಳಿ, ಉಪಾಧ್ಯಕ್ಷ ಮುನಿರಾಜಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.