ಬೆಳಗಾವಿ–ಬೆಂಗಳೂರು ವಂದೇ ಭಾರತ್ ಪ್ರಾರಂಭ: ಗ್ರೀನ್ ಸಿಗ್ನಲ್ ಕೊಟ್ಟ ಮೋದಿ
ಬೆಂಗಳೂರು: ಬೆಳಗಾವಿ ಭಾಗದ ಜನರ ಬಹುದಿನದ ಬೇಡಿಕೆಯಾಗಿದ್ದ ʼವಂದೇ ಭಾರತ್ʼ ರೈಲು ಇಂದು ಆರಂಭವಾಗಿದೆ.
ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕೆಎಸ್ಆರ್ ನಿಲ್ದಾಣದಿಂದ ಪ್ರಧಾನಿ ಮೋದಿ ಅವರು ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲಿಗೆ ಇಂದು ಬೆಳಿಗ್ಗೆ 11.30 ಕ್ಕೆ ಹಸಿರು ನಿಶಾನೆ ತೋರಿದರು.
ಈ ವೇಳೆ ರೈಲನ್ನು ಅದ್ಧೂರಿಯಾಗಿ ಸಿಂಗರಿಸಲಾಗಿತ್ತು. ರೈಲಿನ ಒಳ ಹೋಗಿ ಪ್ರಯಾಣಿಕರು, ಮಕ್ಕಳೊಂದಿಗೆ ಮೋದಿ ಕೆಲಕಾಲ ಸಂವಾದ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಇದೇ ವೇಳೆ ಇವತ್ತಿನಿಂದ ಆರಂಭವಾದ ನಾಗ್ಪುರದ ಅಜ್ನಿ-ಪುಣೆ ಹಾಗೂ ಅಮೃತಸರ-ಶ್ರೀ ಮಾತಾ ವೈಷ್ಣವೊ ದೇವಿ ಕಾತ್ರಾ ಮಧ್ಯೆ ನೂತನ ವಂದೇ ಭಾರತ್ ರೈಲುಗಳಿಗೂ ಬೆಂಗಳೂರಿನಿಂದಲೇ ಹಸಿರು ನಿಶಾನೆ ತೋರಿದರು.
ಬೆಳಿಗ್ಗೆ 11.15 ಕ್ಕೆ ವಂದೇ ಭಾರತ ರೈಲು ಬೆಂಗಳೂರಿನಿಂದ–ಬೆಳಗಾವಿಗೆ ಉದ್ಘಾಟನಾರ್ಥ ಸಂಚಾರ ಆರಂಭಿಸಲಿದ್ದು ಆಗಸ್ಟ್ 11ರಿಂದ ಅಂದರೆ ನಾಳೆಯಿಂದ ನಿಯಮಿತ ಸಂಚಾರ ಆರಂಭಿಸಲಿದೆ. ಟ್ರೈನ್ ನಂಬರ್ 26751/ 26752
ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲು ಸಂಚಾರದ ವೇಳಾಪಟ್ಟಿ ಹೀಗಿದೆ..
ಬುಧವಾರ ಹೊರತುಪಡಿಸಿ ವಂದೇ ಭಾರತ್ ಸೆಮಿ ಹೈಸ್ಪೀಡ್ ರೈಲು ಬೆಂಗಳೂರಿನಿಂದ 11.15ಕ್ಕೆ ಹೊರಟು, ಯಶವಂತಪುರ, ತುಮಕೂರು, ದಾವಣಗೆರೆ, ಎಸ್ಎಂಎಂ ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ ಮತ್ತು ಧಾರವಾಡ ನಿಲ್ದಾಣಗಳಲ್ಲಿ ನಿಲುಗಡೆಯಾಗಿ, ರಾತ್ರಿ 8 ಗಂಟೆಗೆ ಬೆಳಗಾವಿ ತಲುಪಲಿದೆ.
26751 ಸಂಖ್ಯೆಯ ರೈಲು ಬೆಳಗಾವಿಯಿಂದ ಬೆಳಿಗ್ಗೆ 5.20ಕ್ಕೆ ಹೊರಟು, ಮಧ್ಯಾಹ್ನ 1.50ಕ್ಕೆ ಬೆಂಗಳೂರು ತಲುಪಲಿದೆ. ಧಾರವಾಡ (ಬೆಳಿಗ್ಗೆ 7.08/7:10), ಎಸ್ಎಸ್ಎಸ್ ಹುಬ್ಬಳ್ಳಿ (7.30/7.35), ಎಸ್ಎಂಎಂ ಹಾವೇರಿ (8.35/8.37), ದಾವಣಗೆರೆ (9.25/9.27), ತುಮಕೂರು (ಮಧ್ಯಾಹ್ನ 12.15/12.17) ಯಶವಂತಪುರ (1.03/1.05) ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.
ಬೆಂಗಳೂರಿನ ಕೆಎಸ್ಆರ್ ನಿಲ್ದಾಣದಿಂದ ಮಧ್ಯಾಹ್ನ 2.20ಕ್ಕೆ ಹೊರಡುವ ರೈಲು (26752), ರಾತ್ರಿ 10.40ಕ್ಕೆ ಬೆಳಗಾವಿ ತಲುಪಲಿದೆ. ಯಶವಂತಪುರ (ಮಧ್ಯಾಹ್ನ 2.28/2.30), ತುಮಕೂರು (3.03/3.05), ದಾವಣಗೆರೆ (5.48/5.50), ಎಸ್ಎಂಎಂ ಹಾವೇರಿ (6.48/6.50), ಎಸ್ಎಸ್ಎಸ್ ಹುಬ್ಬಳ್ಳಿ (ರಾತ್ರಿ 8/8.05) ಮತ್ತು ಧಾರವಾಡ (8.25/8.27) ನಿಲ್ದಾಣಗಳಲ್ಲಿ ನಿಲುಗಡೆ ಆಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.