ಬೆಂಗಳೂರು: ಕಲಬುರಗಿ–ಬೆಂಗಳೂರು ಎಸ್ಎಂವಿಟಿ–ಕಲಬುರಗಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಯಾದಗಿರಿ ನಿಲ್ದಾಣದಲ್ಲಿ ಒಂದು ನಿಮಿಷದ ನಿಲುಗಡೆ ನೀಡುವ ನಿರ್ಧಾರವನ್ನು ದಕ್ಷಿಣ ಮಧ್ಯ ರೈಲ್ವೆಯು ಶುಕ್ರವಾರ ಹಿಂಪಡೆದಿದೆ.
‘ಯಾದಗಿರಿಯಲ್ಲಿ ಜುಲೈ 27ರಿಂದ ಒಂದು ನಿಮಿಷ ನಿಲುಗಡೆ ನೀಡಲಾಗುವುದು’ ಎಂದು ದಕ್ಷಿಣ ಮಧ್ಯ ರೈಲ್ವೆ ಗುರುವಾರ ಪ್ರಕಟಣೆ ನೀಡಿತ್ತು. ಒಂದೇ ದಿನದಲ್ಲಿ ಈ ನಿರ್ಧಾರದಿಂದ ಹಿಂದಕ್ಕೆ ಸರಿದಿದ್ದು, ‘ಮುಂದಿನ ಸಲಹೆ ಬರುವವರೆಗೆ ನಿಲುಗಡೆ ನಿರ್ಧಾರವನ್ನು ರದ್ದು ಮಾಡಲಾಗಿದೆ’ ಎಂದು ತಿಳಿಸಿದೆ.
ಗುರುವಾರ ಹೊರತುಪಡಿಸಿ ವಾರಕ್ಕೆ ಆರು ದಿನ ಸಂಚರಿಸುವ ಈ ವಂದೇ ಭಾರತ್ ರೈಲು ಕಳೆದ ಮಾರ್ಚ್ನಲ್ಲಿ ಆರಂಭವಾಗಿತ್ತು. ರಾಯಚೂರು ಜಂಕ್ಷನ್, ಮಂತ್ರಾಲಯ ರಸ್ತೆ, ಗುಂತಕಲ್ ಜಂಕ್ಷನ್, ಅನಂತಪುರ ಮತ್ತು ಯಲಹಂಕದಲ್ಲಿ ನಿಲುಗಡೆ ಹೊಂದಿತ್ತು. ಯಾದಗಿರಿಯಲ್ಲಿ ನಿಲುಗಡೆ ನೀಡಬೇಕು ಎಂದು ಪ್ರಯಾಣಿಕರು ಬೇಡಿಕೆ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.