ADVERTISEMENT

ಬೆಂಗಳೂರು: ವರ್ತೂರು ಎಲಿವೆಟೆಡ್ ಕಾರಿಡಾರ್ ಶೀಘ್ರ ಆರಂಭ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 18:50 IST
Last Updated 11 ನವೆಂಬರ್ 2025, 18:50 IST
ಕೆಆರ್‌ಡಿಸಿಎಲ್ ಅಧಿಕಾರಿಗಳು ವರ್ತೂರು ಕೋಡಿ ಬಳಿ ಎಲಿವೇಟೆಡ್‌ ಕಾರಿಡಾರ್‌ ಸ್ಥಳ ಪರಿಶೀಲನೆ ನಡೆಸಿದರು.
ಕೆಆರ್‌ಡಿಸಿಎಲ್ ಅಧಿಕಾರಿಗಳು ವರ್ತೂರು ಕೋಡಿ ಬಳಿ ಎಲಿವೇಟೆಡ್‌ ಕಾರಿಡಾರ್‌ ಸ್ಥಳ ಪರಿಶೀಲನೆ ನಡೆಸಿದರು.   

ಕೆ.ಆರ್.ಪುರ: ಭೂಸ್ವಾಧೀನ ಪ್ರಕ್ರಿಯೆಯಲ್ಲಿ ತೊಡಕುಂಟಾಗಿ ನನೆಗುದಿಗೆ ಬಿದ್ದಿದ್ದ ವರ್ತೂರು ಕೋಡಿಯಿಂದ ವರ್ತೂರುವರೆಗಿನ ಎಲಿವೆಟೆಡ್ ಕಾರಿಡಾರ್ ಕಾಮಗಾರಿ ಪುನರ್ ಆರಂಭಿಸಲು ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ (ಕೆಆರ್‌ಡಿಸಿಎಲ್) ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಮಹದೇವಪುರ ಟಾಸ್ಕ್ ಫೋರ್ಸ್ ತಂಡ ಹಾಗೂ ಸ್ಥಳೀಯ ಮುಖಂಡರೊಂದಿಗೆ ಯೋಜನೆ ಸ್ಥಳ ಪರಿಶೀಲನೆ ನಡೆಸಲಾಗಿದೆ. ಜಮೀನು ಮಾಲೀಕರೊಂದಿಗಿನ ಸಂಧಾನ ಪ್ರಕ್ರಿಯೆ ಪೂರ್ಣಗೊಳಿಸಿ ಶೀಘ್ರ ಕಾಮಗಾರಿ ಆರಂಭಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.

ಮಹದೇವಪುರ ಟಾಸ್ಕ್ ಫೋರ್ಸ್ ತಂಡದ ಉಪಾಧ್ಯಕ್ಷ ಎಲ್.ರಾಜೇಶ್ ಮಾತನಾಡಿ, ‘ಮಾಜಿ ಸಚಿವ ಅರವಿಂದ ಲಿಂಬಾವಳಿ ಹಾಗೂ ಶಾಸಕಿ ಮಂಜುಳಾ ಲಿಂಬಾವಳಿ ಅವರು ಭೂಮಾಲೀಕರೊಂದಿಗೆ ನಿರಂತರ ಸಂಧಾನ ಪ್ರಕ್ರಿಯೆ ನಡೆಸಿ ಸರ್ಕಾರದಿಂದ ದೊರೆಯಬೇಕಾದ ಪರಿಹಾರವನ್ನು ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ’ ಎಂದರು.

ADVERTISEMENT

‘ಈಗ ಜಮೀನು ಮಾಲೀಕರು ಜಾಗ ಬಿಟ್ಟು ಕೊಡಲು ಒಪ್ಪಿದ್ದರಿಂದ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿ ಅತಿಶೀಘ್ರದಲ್ಲಿ ಎಲಿವೆಟೆಡ್ ಕಾರಿಡಾರ್ ರಸ್ತೆ ಮತ್ತು ಸರ್ವೀಸ್ ರಸ್ತೆಗಳನ್ನು ನಿರ್ಮಾಣ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ’ ಎಂದು ಮಾಹಿತಿ ನೀಡಿದರು.

ಕೆಆರ್‌ಡಿಸಿಎಲ್ ವ್ಯವಸ್ಥಾಪಕ ನಿರ್ದೇಶಕಿ ಎನ್‌.ಸುಶೀಲಮ್ಮ, ಮುಖ್ಯ ಎಂಜಿನಿಯರ್ ವಸಂತ್ ನಾಯಕ್, ಭೂ ಸ್ವಾಧೀನ ಅಧಿಕಾರಿಗಳು, ಬಿಬಿಎಂಪಿ ಅಧಿಕಾರಿಗಳು, ಮಹದೇವಪುರ ಟಾಸ್ಕ್ ಫೋರ್ಸ್ ಸದಸ್ಯರು ಉಪಸ್ಥಿತರಿದ್ದರು.