ಬೆಂಗಳೂರು: ‘ಕಳ್ಳತನ ಆರೋಪ ಹೊರಿಸಿ ಸಲ್ಮಾನ್ ಖಾನ್ ಎಂಬುವರನ್ನು ಥಳಿಸಿದ್ದಾರೆ’ ಎಂಬ ದೂರಿಗೆ ಸಂಬಂಧಪಟ್ಟಂತೆ ವರ್ತೂರು ಠಾಣೆಯ ಮೂವರು ಪೊಲೀಸರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.
‘ಮಗ ಸಲ್ಮಾನ್ ಖಾನ್ ಅವರನ್ನು ಠಾಣೆಗೆ ಎಳೆದೊಯ್ದಿದ್ದ ವರ್ತೂರು ಪೊಲೀಸರು ಮನಬಂದಂತೆ ಹಲ್ಲೆ ಮಾಡಿದ್ದಾರೆ. ಅದರಿಂದ ಮಗ ಬಲಗೈ ಕಳೆದುಕೊಂಡಿದ್ದಾನೆ’ ಎಂದು ಆರೋಪಿಸಿ ತಂದೆ ಅಮ್ಜದ್ ಖಾನ್ ಇತ್ತೀಚೆಗಷ್ಟೇ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರಿಗೆ ದೂರು ನೀಡಿದ್ದರು.
ದೂರು ಪರಿಶೀಲಿಸಿದ್ದ ಕಮಲ್ ಪಂತ್, ತನಿಖೆ ನಡೆಸುವಂತೆ ವೈಟ್ಫೀಲ್ಡ್ ಉಪವಿಭಾಗದ ಎಸಿಪಿಗೆ ಸೂಚಿಸಿದ್ದರು. ಪ್ರಾಥಮಿಕ ತನಿಖೆ ಮುಗಿಸಿರುವ ಎಸಿಪಿ, ಅದರ ವರದಿಯನ್ನು ಡಿಸಿಪಿ ಮೂಲಕ ಕಮಲ್ ಪಂತ್ ಅವರಿಗೆ ನೀಡಿದ್ದಾರೆ.
‘ತನಿಖೆಯ ಪ್ರಾಥಮಿಕ ವರದಿ ಆಧರಿಸಿ, ವರ್ತೂರು ಠಾಣೆಯ ಹೆಡ್ ಕಾನ್ಸ್ಟೆಬಲ್ ನಾಗಭೂಷಣ ಹಾಗೂ ಕಾನ್ಸ್ಟೆಬಲ್ಗಳಾದ ಶಿವರಾಜ್, ನಾಗರಾಜ್ ಅವರನ್ನು ಕಮಿಷನರ್ ಅಮಾನತು ಮಾಡಿದ್ದಾರೆ. ಇಲಾಖೆ ತನಿಖೆಗೂ ಆದೇಶ ಹೊರಡಿಸಿದ್ದಾರೆ. ಪೊಲೀಸರ ಮೇಲಿನ ಆರೋಪ ಸಾಬೀತಾದರೆ, ಅವರ ವಿರುದ್ಧ ಕ್ರಿಮಿನಲ್ ಪ್ರಕರಣವೂ ದಾಖಲಾಗುವ ಸಾಧ್ಯತೆ ಇದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಕಠಿಣ ಕ್ರಮಕ್ಕೆ ಆಗ್ರಹ: ‘ಅಮಾಯಕರಾದ ಸಲ್ಮಾನ್ ಖಾನ್ ಮೇಲೆ ವಿನಾಕಾರಣ ಹಲ್ಲೆ ಮಾಡಿರುವ ವರ್ತೂರು ಪೊಲೀಸರು, ಕೈ ಕಳೆದುಕೊಳ್ಳುವಂತೆ ಮಾಡಿದ್ದಾರೆ. ಅಂಥ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ‘ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್’ ಪ್ರತಿನಿಧಿಗಳು ಒತ್ತಾಯಿಸಿದ್ದಾರೆ.
‘ಸಲ್ಮಾನ್ ಖಾನ್ ಮನೆ ಹಾಗೂ ಠಾಣೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಾಗಿದೆ. ಪೊಲೀಸರು ತಪ್ಪು ಮಾಡಿರುವುದು ಗೊತ್ತಾಗಿದೆ. ಈ ಬಗ್ಗೆ ಮಾನವ ಹಕ್ಕು ಆಯೋಗಕ್ಕೂ ದೂರು ನೀಡಲಾಗಿದೆ. ದೂರಿನನ್ವಯ ಕ್ರಮ ಕೈಗೊಳ್ಳಬೇಕು. ಸಲ್ಮಾನ್ ಖಾನ್ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡಬೇಕು’ ಎಂದೂ ಪ್ರತಿನಿಧಿಗಳು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.