ADVERTISEMENT

ಬೆಂಗಳೂರು| ‘ವಿಬಿ– ಗ್ರಾಮ್‌ ಜಿ’ ತಿರಸ್ಕಾರಕ್ಕೆ ಮಹಾಪಂಚಾಯಿತಿ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 16:07 IST
Last Updated 2 ಫೆಬ್ರುವರಿ 2026, 16:07 IST
ನರೇಗಾ ಮರುಸ್ಥಾಪನೆಗಾಗಿ ಒತ್ತಾಯಿಸಿ 'ನರೇಗಾ ರಕ್ಷಣಾ ಒಕ್ಕೂಟ–ಕರ್ನಾಟಕ', ಸದಸ್ಯರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಮಹಾ ಪಂಚಾಯಿತಿ ನಡೆಸಿದರು –ಪ್ರಜಾವಾಣಿ ಚಿತ್ರ
ನರೇಗಾ ಮರುಸ್ಥಾಪನೆಗಾಗಿ ಒತ್ತಾಯಿಸಿ 'ನರೇಗಾ ರಕ್ಷಣಾ ಒಕ್ಕೂಟ–ಕರ್ನಾಟಕ', ಸದಸ್ಯರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಮಹಾ ಪಂಚಾಯಿತಿ ನಡೆಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಉಳಿಸಿ ಆಂದೋಲನದ ಭಾಗವಾಗಿ ‘ನರೇಗಾ ರಕ್ಷಣಾ ಒಕ್ಕೂಟ–ಕರ್ನಾಟಕ ವತಿಯಿಂದ ಸೋಮವಾರ ನಡೆದ ಮಹಾ ಪಂಚಾಯತ್‌, ‘ವಿಬಿ– ಗ್ರಾಮ್‌ ಜಿ’ಯನ್ನು ತಿರಸ್ಕರಿಸಲು ನಿರ್ಧರಿಸಿದೆ.

‘ನರೇಗಾ ಯೋಜನೆಯನ್ನು ಮುಂದುವರಿಸಲು ರಾಷ್ಟ್ರಪತಿಯವರು ಆದೇಶ ಹೊರಡಿಸಬೇಕು. ವಿಬಿ– ಗ್ರಾಮ್‌ ಜಿ ಕಾಯ್ದೆಯನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು’ ಎಂದು ನಿರ್ಣಯ ಕೈಗೊಂಡಿದೆ.

ಗ್ರಾಮೀಣ ಭಾಗದ ಬಡವರ ಬೆನ್ನೆಲುಬು, ಸಂವಿಧಾನದಬದ್ಧ ಹಕ್ಕು ಆಗಿದ್ದ ನರೇಗಾ ಯೋಜನೆಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಜನರನ್ನು ಅತಂತ್ರಗೊಳಿಸುವ, ಎಲ್ಲ ತೀರ್ಮಾನವನ್ನು ಕೈಗೊಳ್ಳುವ ಹಕ್ಕನ್ನು ಕೇಂದ್ರ ಸರ್ಕಾರವೇ ವಶಪಡಿಸಿಕೊಳ್ಳುವ ಮತ್ತು ಜವಾಬ್ದಾರಿಯನ್ನು ರಾಜ್ಯ ಸರ್ಕಾರದ ಮೇಲೆ ಹೊತ್ತು ಹಾಕುವ ವಿಬಿ ಗ್ರಾಮ್‌ ಜಿ ಕಾಯ್ದೆಯನ್ನು ಜಾರಿಗೆ ತಂದಿದೆ ಎಂದು ಪಂಚಾಯಿತಿಯಲ್ಲಿ ತಿಳಿಸಲಾಯಿತು. 

ADVERTISEMENT

ಮಹಾಪಂಚಾಯಿತಿ ತೆಗೆದುಕೊಂಡಿರುವ ನಿರ್ಣಯಗಳನ್ನು ರಾಜ್ಯ ಸರ್ಕಾರವು ರಾಜ್ಯಪಾಲರ ಮೂಲಕ ರಾಷ್ಟ್ರಪತಿಯವರಿಗೆ ಕಳುಹಿಸಿಕೊಡಬೇಕು. ನರೇಗಾವನ್ನು ಬಲಗೊಳಿಸುವ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.

ವಿಕೇಂದ್ರೀಕರಣದ ಸಂಕೇತವಾಗಿ ಇದ್ದ ನರೇಗಾವನ್ನು ರದ್ದು ಮಾಡಿ ಈಗ ಕೇಂದ್ರೀಕರಣದ ಯೋಜನೆಯನ್ನು ಜಾರಿಗೆ ತರಲಾಗಿದೆ. ನರೇಗಾವನ್ನು ಮುಂದುವರಿಸಬೇಕು. ಅಲ್ಲದೇ ಕುಟುಂಬಕ್ಕೆ ನೂರು ದಿನ ಕೆಲಸ ಎಂಬುದನ್ನು ಪ್ರತಿ ವ್ಯಕ್ತಿಗೆ ನೂರು ದಿನ ಎಂದು ಪರಿವರ್ತಿಸಬೇಕು. ಪ್ರತಿ ಕುಟುಂಬಕ್ಕೆ ಸರಾಸರಿ 300 ದಿನ ಕೆಲಸ ಸಿಗುವಂತೆ ಮಾಡಬೇಕು. ಕನಿಷ್ಠ ಕೂಲಿಯನ್ನು ₹ 600ಕ್ಕೆ ಏರಿಸಬೇಕು ಎಂದು ಒತ್ತಾಯಿಸಲಾಯಿತು.

ಶೇ 40ರಷ್ಟು ಅನುದಾನವನ್ನು ರಾಜ್ಯ ಸರ್ಕಾರ ನೀಡಬೇಕಿದೆ. ಇದನ್ನು ತೆಗೆದು ಹಾಕಬೇಕು. ನರೇಗಾದಲ್ಲಿ ಮಧ್ಯವರ್ತಿಗಳಿಗೆ ಅವಕಾಶ ಇರಲಿಲ್ಲ. ‘ವಿಬಿ ಗ್ರಾಮ್‌ ಜಿ’ಯಲ್ಲಿ ಮಧ್ಯವರ್ತಿಗಳಿಗೆ ಅವಕಾಶವಾಗಿದೆ. ಹಾಗಾಗಿ ನರೇಗಾವನ್ನು ಮತ್ತೆ ಸ್ಥಾಪಿಸಬೇಕು ಎಂದು ಒತ್ತಾಯಿಸಲಾಯಿತು.

ನರೇಗಾ ರಕ್ಷಣಾ ಒಕ್ಕೂಟ, ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ, ನಮ್ಮೂರ ಭೂಮಿ ನಮಗಿರಲಿ, ಅನ್ಯರಿಗಲ್ಲ ಸಂಘಟನೆ, ರೈತ ಸಂಘಟನೆಗಳು, ದಲಿತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಮಹಿಳಾ ಸಂಘಟನೆಗಳು ಸೇರಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಶಾರದಾ ಗೋಪಾಲ್‌, ನೂರ್‌ ಶ್ರೀಧರ್‌, ಅಭಯಕುಮಾರ್‌, ಹುಚ್ಚಮ್ಮ, ಕ್ಲಿಫ್ಟನ್ ಡಿ ರೊಜಾರಿಯೊ, ವಿ.ಗಾಯತ್ರಿ, ನ.ಸಂ.ಕೃ., ವಿ.ಎಸ್‌. ಉಗ್ರಪ್ಪ, ಮಾವಳ್ಳಿ ಶಂಕರ್‌, ಸ್ವರ್ಣ ಭಟ್‌, ಕೆ.ವಿ. ಭಟ್‌, ದೇವಿ, ಪ್ರಕಾಶ್‌ ಕಮ್ಮರಡಿ, ಪುಟ್ಟಮಾದು, ನವೀನ್‌, ಗುರುರಾಜ್‌ ಸಹಿತ ಅನೇಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.