ADVERTISEMENT

ವಿಬಿಎಸ್‌ಎಯಿಂದ ಶಿಕ್ಷಣ ಕ್ಷೇತ್ರದ ಗೊಂದಲ ಪರಿಹಾರ: ಬಿ.ಆರ್. ಶಂಕರಾನಂದ

ಭಾರತೀಯ ಶಿಕ್ಷಣ ಮಂಡಲದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಆರ್. ಶಂಕರಾನಂದ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 14:58 IST
Last Updated 28 ಫೆಬ್ರುವರಿ 2026, 14:58 IST
ವಿಕಸಿತ ಭಾರತ ಶಿಕ್ಷಾ ಅಧಿಷ್ಠಾನ (ವಿಬಿಎಸ್‌ಎ) ಮಸೂದೆ ಕುರಿತ ದುಂಡು ಮೇಜಿನ ಸಭೆಯಲ್ಲಿ ಎಸ್.ಎಸ್. ಮಂಥ, ಎಂ.ಆರ್. ಜಯರಾಮ್, ಬಿ.ಆರ್‌. ಶಂಕರಾನಂದ, ಅಜಯ್ ರಾವಲ್ ಭಾಗವಹಿಸಿದ್ದರು
ಪ್ರಜಾವಾಣಿ ಚಿತ್ರ
ವಿಕಸಿತ ಭಾರತ ಶಿಕ್ಷಾ ಅಧಿಷ್ಠಾನ (ವಿಬಿಎಸ್‌ಎ) ಮಸೂದೆ ಕುರಿತ ದುಂಡು ಮೇಜಿನ ಸಭೆಯಲ್ಲಿ ಎಸ್.ಎಸ್. ಮಂಥ, ಎಂ.ಆರ್. ಜಯರಾಮ್, ಬಿ.ಆರ್‌. ಶಂಕರಾನಂದ, ಅಜಯ್ ರಾವಲ್ ಭಾಗವಹಿಸಿದ್ದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ದೇಶದಲ್ಲಿ ಈಗ ಶಿಕ್ಷಣದ ವಿವಿಧ ವಿಭಾಗಗಳನ್ನು ವಿಭಿನ್ನ ಸಂಸ್ಥೆಗಳು ನಿಯಂತ್ರಿಸುತ್ತಿವೆ. ವಿಕಸಿತ ಭಾರತ ಶಿಕ್ಷಾ ಅಧಿಷ್ಠಾನ (ವಿಬಿಎಸ್‌ಎ) ಮಸೂದೆ ಜಾರಿಗೆ ಬಂದರೆ ಎಲ್ಲವೂ ಒಂದೇ ಮುಖ್ಯ ವ್ಯವಸ್ಥೆಯಡಿ ಇರಲಿದ್ದು, ಗೊಂದಲ ಪರಿಹಾರಗೊಳ್ಳಲಿದೆ ಎಂದು ಭಾರತೀಯ ಶಿಕ್ಷಣ ಮಂಡಲದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಆರ್. ಶಂಕರಾನಂದ ತಿಳಿಸಿದರು.

ಭಾರತೀಯ ಶಿಕ್ಷಣ ಮಂಡಲ, ಕರ್ನಾಟಕ– ದಕ್ಷಿಣ ವತಿಯಿಂದ ಮಿಥಿಕ್‌ ಸೊಸೈಟಿ ಸಹಯೋಗದಲ್ಲಿ ಶನಿವಾರ ವಿಬಿಎಸ್‌ಎ ಮಸೂದೆ ಬಗ್ಗೆ ಹಮ್ಮಿಕೊಂಡಿದ್ದ ದುಂಡು ಮೇಜಿನ ಸಭೆಯಲ್ಲಿ ಅವರು ಮಾತನಾಡಿದರು.

‘ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಸಾಮಾನ್ಯ ವಿಶ್ವವಿದ್ಯಾಲಯಗಳನ್ನು ನಿಯಂತ್ರಿಸುತ್ತಿದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯು ಎಂಜಿನಿಯರಿಂಗ್ ಮತ್ತು ನಿರ್ವಹಣಾ ಕೋರ್ಸ್‌ಗಳನ್ನು ನಿರ್ವಹಿಸುತ್ತದೆ. ಶಿಕ್ಷಕರ ತರಬೇತಿಯನ್ನು ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ ನಿರ್ವಹಿಸುತ್ತದೆ. ಹೀಗೆ ಪ್ರತ್ಯೇಕವಾಗಿ ಇರುವುದು ಗೊಂದಲ ಮತ್ತು ವಿಳಂಬಕ್ಕೆ ಕಾರಣವಾಗಿದೆ. ಮಾತ್ರವಲ್ಲ, ಕಾಲೇಜುಗಳು ಹೊಸ ಕೋರ್ಸ್‌ ಆರಂಭಿಸಲು ಅನುಮೋದನೆಗಾಗಿ ಕಾಯುವಂತಾಗಿದೆ’ ಎಂದು ತಿಳಿಸಿದರು.

ADVERTISEMENT

‘ಭಾರತವು 2047ರ ವೇಳೆಗೆ ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು, ವಿಕಸಿತ ಭಾರತ ಎಂದು ಕರೆಸಿಕೊಳ್ಳಲು ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಶಿಕ್ಷಣದ ಸುಧಾರಣೆ ಅಗತ್ಯ. ಅದಕ್ಕೆ ಪೂರಕವಾಗಿ ವಿಕಸಿತ ಭಾರತ ಶಿಕ್ಷಾ ಅಧಿಷ್ಠಾನ (ವಿಬಿಎಸ್‌ಎ) ಮಸೂದೆ ಸಿದ್ಧಪಡಿಸಲಾಗಿದೆ’ ಎಂದು ವಿವರಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ–2020ಗೆ ಪೂರಕವಾಗಿ ಮಸೂದೆಯನ್ನು ತಯಾರಿಸಲಾಗಿದೆ. ಶಿಕ್ಷಣವನ್ನು ಸರಳ, ಉತ್ತಮ ಮತ್ತು ಹೆಚ್ಚು ಆಧುನಿಕವಾಗಿಸುವ ಗುರಿಯನ್ನು ಹೊಂದಿದೆ ಎಂದು ಮಾಹಿತಿ ನೀಡಿದರು. 

ಆಲ್‌ ಇಂಡಿಯಾ ಕೌನ್ಸಿಲ್‌ ಫಾರ್‌ ಟೆಕ್ನಿಕಲ್ ಎಜುಕೇಶನ್‌ನ ಮಾಜಿ ಅಧ್ಯಕ್ಷ ಎಸ್.ಎಸ್. ಮಂಥ ಮಾತನಾಡಿ, ‘ಮಸೂದೆಯಲ್ಲಿ ನೀಡಿರುವ ಆಡಳಿತಾತ್ಮಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ವಾಯತ್ತತೆ ಶಿಕ್ಷಣ ಕ್ಷೇತ್ರಕ್ಕೆ ಹೊಸ ಆಯಾಮವನ್ನು ನೀಡಲಿದೆ’ ಎಂದರು.

ಎಂ.ಎಸ್. ರಾಮಯ್ಯ ವಿಶ್ವವಿದ್ಯಾಲಯದ ಕುಲಾಧಿಪತಿ ಎಂ.‌ಆರ್. ಜಯರಾಮ್ ಮಾತನಾಡಿ, ‘ಸ್ವಾತಂತ್ರ್ಯದ ಏಳು ದಶಕಗಳ ನಂತರ ಭಾರತದಲ್ಲಿ ಇದು ಮಹತ್ವದ ಬದಲಾವಣೆಯಾಗಿದೆ. ಜನರ ಚಿಂತನೆಗೆ ಹೊಸ ದಿಕ್ಕನ್ನು ನೀಡಲಿದೆ’ ಎಂದು ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಜಯಕರ ಶೆಟ್ಟಿ, ಎಂ.ಎಸ್. ರಾಮಯ್ಯ ವಿಶ್ವವಿದ್ಯಾಲಯದ ಸಾಮಾಜಿಕ ವಿಜ್ಞಾನ ಮತ್ತು ಕಾನೂನು ಶಾಲೆ ನಿರ್ದೇಶಕ ಗುರುಚರಣ್ ಗೊಲ್ಲರಕೇರಿ, ಭಾರತೀಯ ವಿಜ್ಞಾನ ಸಂಸ್ಥೆಯ ಪ್ರವೀಣ್ ರಾಮಮೂರ್ತಿ, ಸತ್ಯಂ ಸುವಾಸ್, ವೀರಣ್ಣ ಕಮ್ಮಾರ್‌ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.