ಬೆಂಗಳೂರು: ಕಳೆದ ತಿಂಗಳು ಸಾಕಷ್ಟು ಮಳೆಯಾಗಿದ್ದರಿಂದ ಬೆಳೆದ ಬೆಳೆಯೆಲ್ಲ ನಾಶವಾಗಿದ್ದು, ಸೊಪ್ಪಿನ ದರದಲ್ಲಿ ಭಾರಿ ಏರಿಕೆ ಕಂಡಿದೆ. ಮಾರುಕಟ್ಟೆಯಲ್ಲಿ ಮೆಂತ್ಯ, ಪಾಲಕ್ ಸೊಪ್ಪಿಗೆ ತೀವ್ರ ಬರವಿದೆ.
ಭಾನುವಾರ ಕೆ.ಆರ್.ಮಾರುಕಟ್ಟೆಯಲ್ಲಿ ಪಾಲಕ್ ಹಾಗೂ ಮೆಂತ್ಯ ಸೊಪ್ಪಿಗಾಗಿ ಗ್ರಾಹಕರು ಹುಡುಕಾಡುವುದು ಕಂಡು ಬಂತು. ಮಾರುಕಟ್ಟೆಯ ನಾಲ್ಕಾರು ಕಡೆಗಳಲ್ಲಿ ಮಾತ್ರ ಗುಣಮಟ್ಟದ ಸೊಪ್ಪು ಇತ್ತು. ಬೆಲೆ ಏರಿಕೆಯ ನಡುವೆಯೂ ಜನ ಮೆಂತ್ಯ ಹಾಗೂ ಪಾಲಕ್ ಸೊಪ್ಪಿನ ಕಟ್ಟಿಗೆ ತಲಾ ₹35, ₹30 ನೀಡಿ ಖರೀದಿಸಿದರು.
ಒಂದು ಕಟ್ಟು ಕೊತ್ತಂಬರಿ ಸೊಪ್ಪು ₹30 ರಿಂದ ₹50ಕ್ಕೆ ಮಾರಾಟವಾದರೆ, ಸಬ್ಬಸಿಗೆ ₹30 ರಿಂದ ₹40ಕ್ಕೆ ಮಾರಾಟವಾಗುತ್ತಿತ್ತು. ಇನ್ನುಳಿದ ಸೊಪ್ಪಿನ ಬೆಲೆಯೂ ಏರಿಕೆಯಾಗಿದೆ.
ಸೇಬು, ದಾಳಿಂಬೆ ಕೊಂಡುಕೊಳ್ಳಲು ಸಹ ಗ್ರಾಹಕರು ಹೆಚ್ಚಿನ ಬೆಲೆ ತೆರಬೇಕಾಗಿದೆ. ಏಲಕ್ಕಿ ಬಾಳೆಯ ಬೆಲೆ ಕೆ.ಜಿಗೆ ₹40 ದಾಟಿದೆ. ಹಾಪ್ಕಾಮ್ಸ್ನಲ್ಲಿ ₹68ಕ್ಕೆ ಮಾರಾಟ ಮಾಡಲಾಗುತ್ತಿದೆ. ‘ಈ ಬಾರಿ ಮಳೆ ಜಾಸ್ತಿಯಾಗಿದ್ದು, ಸೊಪ್ಪಿನ ಬೆಳೆಗೆ ಭಾರಿ ಹೊಡೆತ ಬಿದ್ದಿದೆ. ಇಳುವರಿಯೂ ಕಡಿಮೆಯಾಗಿದ್ದರಿಂದ ದರ ಏರಿಕೆಯಾಗಿದೆ. ಆದರೂ, ಮಾರುಕಟ್ಟೆಯಲ್ಲಿ ಖರೀದಿಸುವ ಜನರೂ ಇದ್ದಾರೆ’ ಎಂದು ಸೊಪ್ಪಿನ ವ್ಯಾಪಾರಿ ಲಕ್ಷ್ಮಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.