ADVERTISEMENT

ವಿಶ್ವಕರ್ಮ ಸಮುದಾಯ ಕೀಳರಿಮೆ ಬಿಡಲಿ: ಕಂಬಾರ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 21:45 IST
Last Updated 5 ಮಾರ್ಚ್ 2021, 21:45 IST

ಬೆಂಗಳೂರು: ‘ವಿಶ್ವಕರ್ಮರು ನಿರ್ಮಾಣ ಸಂಸ್ಕೃತಿಯ ಹರಿಕಾರರು. ಹಳ್ಳಿ ಹಾಗೂ ನಗರ ನಾಗರಿಕತೆಯನ್ನು ನಿರ್ಮಿಸಿದವರು. ಇಂತಹ ಕಲಾ ಸಮುದಾಯವು ನಾಚಿಕೆ ಹಾಗೂ ಕೀಳರಿಮೆ ಬಿಟ್ಟು ಜಾಗೃತಗೊಳ್ಳಬೇಕು’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಹೇಳಿದರು.

ಕರ್ನಾಟಕ ರಾಜ್ಯ ವಿಶ್ವಕರ್ಮ ಸಾಹಿತ್ಯ ಪರಿಷತ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದಿವಂಗತ ಟಿ.ವಿ. ಮುತ್ತಾಚಾರ್ಯರ ಸಾಹಿತ್ಯ ಸಂಪುಟದ ಭಾಗ–1 ಗ್ರಂಥ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಕುಶಲತೆ, ಬೌದ್ಧಿಕತೆ ಹಾಗೂ ಶ್ರಮ ಸಂಸ್ಕೃತಿಯ ಮೂಲಕ ವಿಶ್ವಕರ್ಮ ಸಮುದಾಯದವರು ಈಗ ಎಲ್ಲಾ ಸ್ತರಗಳಲ್ಲೂ ಮುಂದೆ ಬರುತ್ತಿದ್ದಾರೆ. ಸ್ವಾಭಿಮಾನವನ್ನು ಮೈಗೂಡಿಸಿಕೊಂಡು ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ.ವೆಂಕಟೇಶ್‌, ‘ವಿಶ್ವಕರ್ಮ ಸಮುದಾಯ ಜಗದಗಲ ವ್ಯಾಪಿಸಿದೆ. ಭಾರತೀಯ ದೇಗುಲಗಳು ಹಾಗೂ ಶಿಲ್ಪಗಳು ಈ ಸಮುದಾಯದ ಶ್ರೇಷ್ಠತೆಯನ್ನು ಸಾರುತ್ತವೆ. ಮುತ್ತಾಚಾರ್ಯರು ತಮ್ಮ ಕೃತಿಯ ಮೂಲಕ ಇಡೀ ಸಮು
ದಾಯವನ್ನು ಜಾಗೃತಗೊಳಿಸುವ ಕೆಲಸ ಮಾಡಿದ್ದಾರೆ’ ಎಂದರು.

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ತುಳಸಿ ಮಾಲಾ, ‘ವಿಶ್ವಕರ್ಮರ ಎದುರು ಈಗ ಹಲವು ಸವಾಲುಗಳಿವೆ. ತಮ್ಮ ಕುಲ ಕಸುಬಿನಲ್ಲಿ ಕುಶಲತೆ ಹಾಗೂ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ವಿದ್ಯಾವಂತರಾಗಿ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಬೇಕು’ ಎಂದರು.

ನಿವೃತ್ತ ಐಎಎಸ್‌ ಅಧಿಕಾರಿ ಕೆ.ಎಸ್‌.ಪ್ರಭಾಕರ್‌, ಪರಿಷತ್‌ ರಾಜ್ಯ ಘಟಕದ ಅಧ್ಯಕ್ಷ ಕೆ.ವಿ.ಕೃಷ್ಣಮೂರ್ತಿ, ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬು ಪತ್ತಾರ್‌ ಭಾಗವಹಿಸಿದ್ದರು. ಶ್ರೀ ಶಿವಾತ್ಮನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.