ADVERTISEMENT

ವಿಶ್ವಕರ್ಮ ಜನಜಾಗೃತಿ ಸಮಾವೇಶ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2023, 20:32 IST
Last Updated 24 ಮಾರ್ಚ್ 2023, 20:32 IST
ರಾಜ್ಯ ಮಟ್ಟದ ವಿಶ್ವಕರ್ಮ ಸಮಾಜದ ಬೃಹತ್ ಜನಜಾಗೃತಿ ಸಮಾವೇಶದಲ್ಲಿ ಸಾಹಿತಿ ಚಂದ್ರಶೇಖರ ಕಂಬಾರ ಅವರನ್ನು ಸನ್ಮಾನಿಸಲಾಯಿತು. ವಿಶ್ವಕರ್ಮ ಸೇವಾ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಬಿ.ಎಂ.ಉಮೇಶ್ ಕುಮಾರ್, ಶಿವಸುಜ್ಞಾನತೀರ್ಥ ಸ್ವಾಮೀಜಿ, ವೀರಭಟ್ಲಯ್ಯ ಸ್ವಾಮಿ, ಬಿ. ರುದ್ರಚಾರ್ ಇದ್ದರು – ಪ್ರಜಾವಾಣಿ ಚಿತ್ರ
ರಾಜ್ಯ ಮಟ್ಟದ ವಿಶ್ವಕರ್ಮ ಸಮಾಜದ ಬೃಹತ್ ಜನಜಾಗೃತಿ ಸಮಾವೇಶದಲ್ಲಿ ಸಾಹಿತಿ ಚಂದ್ರಶೇಖರ ಕಂಬಾರ ಅವರನ್ನು ಸನ್ಮಾನಿಸಲಾಯಿತು. ವಿಶ್ವಕರ್ಮ ಸೇವಾ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಬಿ.ಎಂ.ಉಮೇಶ್ ಕುಮಾರ್, ಶಿವಸುಜ್ಞಾನತೀರ್ಥ ಸ್ವಾಮೀಜಿ, ವೀರಭಟ್ಲಯ್ಯ ಸ್ವಾಮಿ, ಬಿ. ರುದ್ರಚಾರ್ ಇದ್ದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಭಾರತದ ಆಭರಣ ಕಲಾತ್ಮಕತೆ ವಿಶ್ವದ ಇನ್ಯಾವ ದೇಶದಲ್ಲೂ ಇಲ್ಲ. ಇದು ನಮ್ಮ ವಿಶ್ವಕರ್ಮರ ಶೈಲಿ’ ಎಂದು ಸಾಹಿತಿ ಚಂದ್ರಶೇಖರ ಕಂಬಾರ ಹೇಳಿದರು.

ವಿಶ್ವಕರ್ಮ ಸೇವಾ ಪ್ರತಿಷ್ಠಾನದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ರಾಜ್ಯಮಟ್ಟದ ವಿಶ್ವಕರ್ಮ ಸಮಾಜದ ಬೃಹತ್‌ ಜನಜಾಗೃತಿ ಸಮಾವೇಶದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಇಂಗ್ಲೆಂಡ್‌ನಲ್ಲಿ ವಿಶ್ವ ಆಭರಣ ಮೇಳದಲ್ಲಿ ಭಾಗವಹಿಸಿದ್ದಾಗ ಅಲ್ಲಿನ ತಜ್ಞರು ಭಾರತದ ಆಭರಣಗಳನ್ನು
ಪ್ರಶಂಸಿಸಿದರು. ಅವುಗಳೇ ಉತ್ತಮ ಎಂದರು. ಏಕೆ ಎಂದು ಕೇಳಿದಾಗ, ಬೇರೆ ದೇಶಗಳ ಆಭರಣಗಳು ಜಿಯೊಮೆಟ್ರಿಗೆ ಅನುಗುಣವಾಗಿರುತ್ತವೆ. ಆದರೆ, ಭಾರತದ ಆಭರಣಗಳು ವಕ್ರರೇಖೆಯ ಕಲಾಕೃತಿಗಳಲ್ಲಿ ಅದ್ಭುತವಾಗಿರುತ್ತವೆ. ಇದು ನಮ್ಮ ವಿಶ್ವಕರ್ಮರ ಸಾಧನೆ’ ಎಂದು ಕಂಬಾರ ನುಡಿದರು.

ADVERTISEMENT

‘ಸಂಸ್ಕೃತಿಗಳನ್ನು ಅಳವಡಿಸಿಕೊಂಡು ತಮ್ಮ ಪ್ರತಿಭೆಯನ್ನು ತೋರಿಸಿ, ಪ್ರಸಿದ್ಧರಾಗಿರುವ ವಿಶ್ವಕರ್ಮರು ಒಗ್ಗಟ್ಟಾಗಬೇಕು. ಇದರಿಂದ ಎಲ್ಲವನ್ನೂ ಸಾಮಾಜಿಕವಾಗಿ ಪಡೆಯಲು ಸಾಧ್ಯ’ ಎಂದರು.

ವಿಶ್ವಕರ್ಮ ಜಗದ್ಗುರು ಪೀಠದ ಶಿವಜ್ಞಾನತೀರ್ಥ ಸ್ವಾಮೀಜಿ, ಸಿಂದಗಿಯ ಶೈಲಸ್ವಾಮಿ ಮೂರುಝಾವದಮಠದ ರಾಮಚಂದ್ರ ಸ್ವಾಮೀಜಿ, ಸ್ವಯಂ ಉದ್ಧವ ಅಭಯಹಸ್ತ ಆದಿಲಕ್ಷ್ಮಿ ಸಂಸ್ಥಾನದ ನೀಲಕಂಠಾಚಾರ್ಯ ಸ್ವಾಮೀಜಿ, ಶಂಕರಾತ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು.

ವಿಶ್ವಕರ್ಮ ಸೇವಾ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಬಿ.ಎಂ. ಉಮೇಶ್‌ ಕುಮಾರ್‌ ನೇತೃತ್ವದಲ್ಲಿ ನಡೆದ ಸಮಾವೇಶದಲ್ಲಿ ನಟಿ ಭವ್ಯಾ, ನಟ ಚಿದಾನಂದ, ಪಂಚ ಶಿಲ್ಪಿಗಳು ಸೇರಿದಂತೆ 12 ಮಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾವೇಶದಲ್ಲಿ 50 ಅಡಿ ಎತ್ತರದ ವಿಶ್ವಕರ್ಮರ ಚಿತ್ರಪಟವನ್ನು ಪ್ರದರ್ಶಿಸಲಾಗಿತ್ತು. ವಿಶ್ವಕರ್ಮರ ಮೂರ್ತಿಗಳನ್ನು ಸ್ಥಾಪಿಸಿದ್ದು ಆಕರ್ಷಕವಾಗಿತ್ತು.

ಎನ್‌. ವೀರಂಭಟ್ಲಯ್ಯ ಸ್ವಾಮಿ, ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ, ವಿಶ್ವಕರ್ಮ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಕೆ.ಎಸ್‌. ಪ್ರಭಾಕರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.