
ಬೆಂಗಳೂರು: ‘ಯುವ ಸಮೂಹ ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ಎತ್ತಿಹಿಡಿಯುವ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಬೇಕು’ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಹಿ.ಚಿ. ಬೋರಲಿಂಗಯ್ಯ ಹೇಳಿದರು.
ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ ವಿಶ್ವಮಾನವ ದಿನಾಚರಣೆ ಮತ್ತು ಪ್ರಸಾರಾಂಗ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಕುವೆಂಪು ಅವರ ಪೂರ್ಣದೃಷ್ಟಿ ಕನ್ನಡ ಸಾಹಿತ್ಯದಲ್ಲಿ ನವ ಮನ್ವಂತರಕ್ಕೆ ನಾಂದಿಯಾಯಿತು’ ಎಂದರು.
‘ಮ್ಯೆಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಕುವೆಂಪು ಅವರು, ಅಧ್ಯಯನಾಂಗ, ಸಂಶೋಧನಾಂಗ ಮತ್ತು ಪ್ರಸಾರಾಂಗ ಎಂಬ ಮೂರು ಆಯಾಮಗಳ ಮೂಲಕ ಉನ್ನತ ಶಿಕ್ಷಣಕ್ಕೆ ಪರಿಪೂರ್ಣತೆಯ ಮಾರ್ಗ ತೋರಿದ್ದರು. ಪ್ರಕೃತಿ ಆರಾಧಕರಾಗಿದ್ದ ಅವರು, ಕಂದಾಚಾರ, ಮೂಢನಂಬಿಕೆ, ವರ್ಣ ವ್ಯವಸ್ಥೆಯ ವಿರುದ್ಧ ಬರವಣಿಗೆ ಮೂಲಕವೇ ಸಮರ ಸಾರಿ ಮನುಜಮತ ವಿಶ್ವಪಥದ ಸಂದೇಶವನ್ನು ಸಾರಿದರು’ ಎಂದು ಹೇಳಿದರು.
ಪ್ರಶಾಂತ ನಾಯಕ್ ಅವರ ‘ನಮ್ಮ ಕುವೆಂಪು’ ಮತ್ತು ತಾಂಡವಗೌಡ ಅವರ ‘ಕೃತಕ ಬುದ್ಧಿಮತ್ತೆಯ ಮೂಲಕ ಬೋಧನಾ ಕೌಶಲ ಅಭಿವೃದ್ಧಿ’ ಎಂಬ ಪುಸ್ತಕಗಳನ್ನು ಜನಾರ್ಪಣೆಗೊಳಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.