ADVERTISEMENT

ಬಾರ್‌ನಲ್ಲಿ ಬೈದಿದ್ದಕ್ಕೆ ಮನೆಗೆ ನುಗ್ಗಿ ರೌಡಿ ಹತ್ಯೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2024, 15:22 IST
Last Updated 27 ಜನವರಿ 2024, 15:22 IST
<div class="paragraphs"><p>ಕೊಲೆ ( ಸಾಂದರ್ಭಿಕ ಚಿತ್ರ)</p></div>

ಕೊಲೆ ( ಸಾಂದರ್ಭಿಕ ಚಿತ್ರ)

   

ಬೆಂಗಳೂರು: ವಿವೇಕನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ರೌಡಿ ಸತೀಶ್ ಅಲಿಯಾಸ್ ಮಿಲ್ಟ್ರಿ (30) ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

‘ಸ್ಥಳೀಯ ನಿವಾಸಿಗಳಾದ ಸುನೀಲ್ ಜೇಮ್ಸ್, ಕ್ಲೆಮೆಂಟ್, ಪ್ರಶಾಂತ್ ಹಾಗೂ ಧನುಷ್ ಬಂಧಿತರು. ಇವರೆಲ್ಲರೂ ಸೇರಿಕೊಂಡು ಜ. 24ರಂದು ಸತೀಶ್‌ ಮನೆಗೆ ನುಗ್ಗಿ ಹತ್ಯೆ ಮಾಡಿ ಪರಾರಿಯಾಗಿದ್ದರು’ ಎಂದು ಪೊಲೀಸರು ಹೇಳಿದರು.

ADVERTISEMENT

‘ಮಾಯಾ ಬಜಾರ್ ನಿವಾಸಿ ಸತೀಶ್, ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. ವಿವೇಕನಗರ ಠಾಣೆಯ ರೌಡಿ ಪಟ್ಟಿಯಲ್ಲಿ ಈತನ ಹೆಸರಿತ್ತು. ಸ್ಥಳೀಯರನ್ನು ಈತ ಹೆದರಿಸುತ್ತಿದ್ದ ಬಗ್ಗೆ ಮಾಹಿತಿ ಇದೆ’ ಎಂದು ತಿಳಿಸಿದರು.

‘ಆರೋಪಿ ಪ್ರಶಾಂತ್ ಹಾಗೂ ಸ್ನೇಹಿತರು, ಇತ್ತೀಚೆಗೆ ಬಾರ್‌ವೊಂದಕ್ಕೆ ಹೋಗಿದ್ದರು. ಬಾರ್‌ನಲ್ಲಿ ಪ್ರಶಾಂತ್‌ ಜೊತೆ ಜಗಳ ತೆಗೆದಿದ್ದ ಸತೀಶ್, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಜೊತೆಗೆ, ಆಗಾಗ ಜಗಳ ತೆಗೆದು ಜೀವ ಬೆದರಿಕೆಯೊಡ್ಡುತ್ತಿದ್ದ. ಸಿಟ್ಟಾಗಿದ್ದ ಪ್ರಶಾಂತ್, ಸ್ನೇಹಿತರ ಜೊತೆ ಸೇರಿ ಸತೀಶ್‌ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ.’

‘ಜ. 24ರಂದು ತಡರಾತ್ರಿ ಆರೋಪಿಗಳು ಮಾರಕಾಸ್ತ್ರ ಸಮೇತ ಸತೀಶ್‌ನನ್ನು ಮನೆಯವರೆಗೂ ಹಿಂಬಾಲಿಸಿದ್ದರು. ಮನೆಗೆ ನುಗ್ಗಿ ಹಲ್ಲೆ ಮಾಡಿದ್ದರು. ತೀವ್ರ ಗಾಯಗೊಂಡಿದ್ದ ಸತೀಶ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದರು. ಕೊಲೆ ಸಂಬಂಧ ಪತ್ನಿ ದೂರು ನೀಡಿದ್ದರು’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.