ADVERTISEMENT

ಕಾಂತರಾಜ ಆಯೋಗದ ವರದಿ ತಿರಸ್ಕರಿಸಿ: ರಾಜ್ಯ ಒಕ್ಕಲಿಗರ ಸಂಘ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2023, 20:05 IST
Last Updated 31 ಆಗಸ್ಟ್ 2023, 20:05 IST
   

ಬೆಂಗಳೂರು: ‘ಎಚ್. ಕಾಂತರಾಜ ಆಯೋಗ ಸಿದ್ಧಪಡಿಸಿರುವ ಜಾತಿ ಗಣತಿಯ ಅಸಮರ್ಪಕ ಮತ್ತು ಅವೈಜ್ಞಾನಿಕ ವರದಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು. ಇಲ್ಲವಾದಲ್ಲಿ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು’ ಎಂದು ರಾಜ್ಯ ಒಕ್ಕಲಿಗರ ಸಂಘ ಎಚ್ಚರಿಸಿದೆ. 

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಡಿ. ಹನುಮಂತಯ್ಯ, ‘ಕಾಂತರಾಜ ಆಯೋಗ 2015ರಲ್ಲಿ ಸಮೀಕ್ಷೆಗಾಗಿ ತಯಾರಿಸಿದ್ದ 55 ಅಂಶಗಳ ಸ್ವರೂಪ ಅವೈಜ್ಞಾನಿಕವಾಗಿದೆ. ಇದು ಜನಾಂಗವನ್ನು ಒಡೆಯಲು ಮಾಡಿದ ಹುನ್ನಾರ. ಈ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಸೋಗಿನಲ್ಲಿ ಜಾತಿ ಗಣತಿ ನಡೆಸಿದೆ. ಅಷ್ಟಕ್ಕೂ ಜಾತಿ ಗಣತಿ ಕೇಂದ್ರ ಸರ್ಕಾರದ ಹಕ್ಕಾಗಿದ್ದು, ರಾಜ್ಯ ಸರ್ಕಾರಕ್ಕೆ ಜಾತಿ ಗಣತಿ ನಡೆಸುವ ಅಧಿಕಾರವಿಲ್ಲ. ಆದ್ದರಿಂದ, ಕಾಂತರಾಜ ಆಯೋಗದ ವರದಿ ಕಾನೂನುಬಾಹಿರ’ ಎಂದರು. 

‘ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಕಾಂತರಾಜ ಆಯೋಗ ತಯಾರಿಸಿರುವ ವರದಿಯನ್ನು ಸರ್ಕಾರಕ್ಕೆ ಶೀಘ್ರದಲ್ಲೇ ಸಲ್ಲಿಸುವುದಾಗಿ ಹೇಳಿದ್ದಾರೆ. ವರದಿಯನ್ನು ಸರ್ಕಾರ ಅಂಗೀಕರಿಸಿದಲ್ಲಿ ರಾಜ್ಯದ ಎಲ್ಲಾ ಒಕ್ಕಲಿಗರ ಸಂಘ–ಸಂಸ್ಥೆಗಳು ಹಾಗೂ ಜನಾಂಗವು ಹೋರಾಟ ನಡೆಸುವುದು ಅನಿವಾರ್ಯ’ ಎಂದು ಎಚ್ಚರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.